ವಿದ್ಯುತ್ ದರ ಪರಿಷ್ಕರಣೆ: ಇನ್ನಷ್ಟು ವಿಳಂಬ ಸಾಧ್ಯತೆ
Team Udayavani, Feb 21, 2017, 3:45 AM IST
ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬೆಸ್ಕಾಂ, ಏಕಾಏಕಿ ಗ್ರಾಹಕರಿಗೆ ಆಕ್ಷೇಪಣೆ
ಸಲ್ಲಿಸಲು ಕಾಲಾವಕಾಶ ನೀಡದೆ ಪ್ರಸ್ತಾವನೆ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಕೆಇಆರ್ಸಿ ಆಕ್ಷೇಪಣೆ ಸಲ್ಲಿಕೆಗೆ ಮತ್ತೆ 30 ದಿನಗಳ
ಸಮಯಾವಕಾಶ ನೀಡಿದೆ.
ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರ್ನಾಟಕ ವಿದುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ದ ಕಚೇರಿಯಲ್ಲಿ ಸೋಮವಾರ
ನಡೆದ ವಿಚಾರಣೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇದಕ್ಕೂ ಮೊದಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಸದಸ್ಯರು ಸೇರಿ ಕೆಲವು ಉದ್ಯಮಿಗಳು ಮತ್ತು ಸಾಮಾನ್ಯ ಗ್ರಾಹಕರು, ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಬೆಸ್ಕಾಂ ತಿದ್ದುಪಡಿ ಮಾಡಿರುವ ಬಗ್ಗೆ ಆಯೋಗದ ಗಮನ ಸೆಳೆದರು. ಈ ಅಂಶವನ್ನು ಪರಿಗಣಿಸಿದ ಆಯೋಗವು ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ
ಮತ್ತೆ 30 ದಿನಗಳ ಕಾಲಾವಕಾಶ ನೀಡಿತು.
ತಿದ್ದುಪಡಿ ಏನು?: ಬೆಸ್ಕಾಂ ತಾನು ಆಯೋಗಕ್ಕೆ ಸಲ್ಲಿಸಿದ್ದ ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾವನೆಯಲ್ಲಿ ಎಲ್ಟಿ-2ಎ ಗ್ರಾಹಕರಿಗಾಗಿ
ಹೆಚ್ಚುವರಿ ಹಂತಗಳ ಸೃಷ್ಟಿ, ಎಲ್ಇಡಿ ಬೀದಿ ದೀಪಗಳಿಗೆ ವಿದ್ಯುತ್ ದರದಲ್ಲಿ ವಿನಾಯಿತಿ, ಬೀದಿ ದೀಪಗಳಲ್ಲಿ ಎಲ್ಇಡಿ ಬಲ್ಬ್
ಅಳವಡಿಸದಿದ್ದರೆ ಹೆಚ್ಚು ದರ, ಬೇಡಿಕೆ ಶುಲ್ಕ ಹೆಚ್ಚಿಸಿ ತಿದ್ದುಪಡಿ ಮಾಡಿತ್ತು. ಈ ಬಗ್ಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಮಾತ್ರ ಜಾಹೀರಾತು ಪ್ರಕಟಣೆ ನೀಡಿತ್ತು. ಇದನ್ನು ಪ್ರಶ್ನಿಸಿದ ಎಫ್ ಕೆಸಿಸಿ ಸದಸ್ಯರು, ಆಕ್ಷೇಪಣೆ ಸಲ್ಲಿಸಲು ನಾಲ್ಕು ದಿನಗಳ ಸಮಯ ಸಾಕಾಗುವುದಿಲ್ಲ. ಅಷ್ಟಕ್ಕೂ ಇದು ಆಯೋಗದ ಆದೇಶಕ್ಕೆ ಅನುಗುಣವಾಗಿಲ್ಲ ಎಂದು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವಾದವನ್ನು ಪುರಸ್ಕರಿಸಿದ ಕೆಇಆರ್ಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತೆ 30 ದಿನಗಳು ಕಾಲಾವಕಾಶ ನೀಡಿದೆ.
ಏ. 1ಕ್ಕೆ ಪರಿಷ್ಕೃತ ದರ ಅನುಮಾನ?: ಆಯೋಗ ಹೊರಡಿಸಿದ ಈ ನೂತನ ಆದೇಶದಿಂದ ನಿಗದಿತ ಅವಧಿಯಲ್ಲಿ ದರ ಪರಿಷ್ಕರಣೆ ಆದೇಶ ಹೊರಬರುವುದು ಅನುಮಾನವಾಗಿದೆ. ಯಾಕೆಂದರೆ, ಸೋಮವಾರದಿಂದ 30 ದಿನಗಳು ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಾದ ನಂತರ ಸಾರ್ವಜನಿಕ ಅಹವಾಲುಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಆಮೇಲೆ ಪರಿಶೀಲಿಸಿ
ಆದೇಶ ಹೊರಡಿಸಬೇಕು. ಸಾಮಾನ್ಯವಾಗಿ ಹೊಸ ಹಣಕಾಸು ವರ್ಷದಿಂದ ಹೊಸ ಪರಿಷ್ಕೃತ ದರ ಪ್ರಕಟಿಸಲಾಗುತ್ತದೆ.
ವಿಚಾರಣೆ ಆರಂಭಗೊಳ್ಳುವುದಕ್ಕೆ ನಾಲ್ಕು ದಿನ ಮುಂಚಿತವಾಗಿ ಅಂದರೆ ಫೆ. 16ರಂದು ಏಕಾಏಕಿ ಬೆಸ್ಕಾಂ ದರ ಪರಿಷ್ಕರಣೆಯಲ್ಲಿ
ತಿದ್ದುಪಡಿ ಮಾಡಿದೆ. ಇದು ಕೆಇಆರ್ಸಿ ಆದೇಶಕ್ಕೆ ವಿರುದಟಛಿವಾಗಿದೆ. ಮೊದಲ ಪ್ರಕಟಣೆ ಹೊರಡಿಸಿದ ನಂತರದಿಂದ ಸಾರ್ವಜನಿಕ
ಆಕ್ಷೇಪಣೆ ಸಲ್ಲಿಕೆಗೆ 30 ದಿನ ಕಾಲಾವಕಾಶ ನೀಡಬೇಕು. ಇದಕ್ಕೂ ಮೊದಲು ಪರಿಷ್ಕರಣೆಗೆ ಆಯೋಗದ ಅನುಮತಿ ಪಡೆಯಬೇಕು.
ಇದಾವುದನ್ನೂ ಬೆಸ್ಕಾಂ ಪಾಲಿಸಿಲ್ಲವೆಂದು ಎಫ್ಕೆಸಿಸಿಐ ಸದಸ್ಯ ಎಂ.ಜೆ. ಪ್ರಭಾಕರ್ ತಿಳಿಸಿದರು.
ಬೆಸ್ಕಾಂ ವಸೂಲಾತಿ ಪ್ರಮಾಣ ಶೇಕಡಾ 37
ಇದಕ್ಕೂ ಮುನ್ನ ವಿಚಾರಣೆಯಲ್ಲಿ “ಬಿ-ಪ್ಯಾಕ್’ ಉಪಾಧ್ಯಕ್ಷ ಟಿ.ವಿ. ಮೋಹನ್ದಾಸ್ ಪೈ ಮಾತನಾಡಿ, ರಾಷ್ಟ್ರೀಯ ದರ ನೀತಿ ಪ್ರಕಾರ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಕೃಷಿ ಉದ್ದೇಶಕ್ಕೆ ನೀಡುವ ವಿದ್ಯುತ್ಗೆ ಪ್ರತಿಯಾಗಿ ಸರ್ಕಾರ ನೀಡುವ “ಕ್ರಾಸ್ ಸಬ್ಸಿಡಿ’ಯನ್ನು ಕನಿಷ್ಠ ಶೇ. 50ರಷ್ಟು ವಸೂಲಿ ಮಾಡಬೇಕು ಎಂದಿದೆ. ಆದರೆ, ಬೆಸ್ಕಾಂ ವಸೂಲಾತಿ ಪ್ರಮಾಣ ಶೇ. 37ರಷ್ಟಿದೆ.
ಬೆಸ್ಕಾಂನ ಕ್ರಾಸ್ ಸಬ್ಸಿಡಿ ಮೊತ್ತ 3 ಸಾವಿರ ಕೋಟಿ ಇದೆ ಎಂದು ಹೇಳಿದರು.