ನನ್ನ ಕ್ಷೇತ್ರ ಆಯ್ಕೆಗೆ ರಮೇಶ ಯಾರು?: ಸತೀಶ ಜಾರಕಿಹೊಳಿ
Team Udayavani, Mar 6, 2017, 3:45 AM IST
ಬೆಳಗಾವಿ: ನಾನು ಬೆಳಗಾವಿ ಜಿಲ್ಲೆ ಬಿಟ್ಟು ಹೋಗುತ್ತೇನೆ. ರಾಯಚೂರು ಜಿಲ್ಲೆ ನನ್ನ ಮುಂದಿನ ವಿಧಾನಸಭಾ ಕೇಂದ್ರ ಎಂದು ಹೇಳಿಕೆ ನೀಡಿರುವ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಜವಾಬ್ದಾರಿ ಏನು ಎಂಬುದನ್ನು ಮರೆತಿದ್ದಾರೆ. ನನ್ನ ಸ್ಪರ್ಧೆಯ ಕ್ಷೇತ್ರ ಆಯ್ಕೆ ಮಾಡಲು ಅವರು ಯಾರು?- ಇದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ನೇರ ಮಾತು.
ಭಾನುವಾರ “ಉದಯವಾಣಿ’ ಜತೆ ಮಾತನಾಡಿದ ಅವರು, ನಾನು ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಹೇಳಲು ರಮೇಶ ಜಾರಕಿಹೊಳಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು. ನಾನು ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನಾನು ರಾಯಚೂರು ಜಿಲ್ಲೆಗೆ ಹೋಗಲು ಕಾರಣ ಏನು. ಅಥವಾ ಸಚಿವರ ಮುಂದೆ ನಾನೇನಾದರೂ ಹಾಗೆ ಹೇಳಿದ್ದೇನೆಯೇ? ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿ ಹೇಳಿಕೆ ನೀಡುವ ಮುನ್ನ ಆಲೋಚಿಸಬೇಕು ಎಂದು ಹೇಳಿದರು.