ಕಲಹವೋ, ಶಮನವೋ; ಭಿನ್ನಮತದ ನಡುವೆಯೇ ಇಂದಿನಿಂದ ಕಾರ್ಯಕಾರಿಣಿ
Team Udayavani, May 6, 2017, 9:52 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ವೈಮನಸ್ಸಿನ ನಡುವೆಯೇ ಮೈಸೂರಿನಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ.
ಈ ಕಾರ್ಯಕಾರಿಣಿಗೆ ಈಶ್ವರಪ್ಪ ಅವರು ಗೈರು ಹಾಜರಾಗುತ್ತಾರೆ ಎಂದು ಹೇಳಲಾಗಿತ್ತಾದರೂ ವರಿಷ್ಠರ ತಾಕೀತಿನ ಮೇರೆಗೆ ಕೊನೆ ಕ್ಷಣದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಯಚೂರಿನಲ್ಲಿ ಮೇ 8ರಂದು ಕರೆದಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಭ್ಯಾಸವರ್ಗವನ್ನು ಮುಂದೂಡಿದ್ದಾರೆ.
ಇನ್ನೊಂದೆಡೆ, ಈ ಕಾರ್ಯಕಾರಿಣಿಯ ಗೋಷ್ಠಿಗಳಿಂದ ಕೈಬಿಟ್ಟರೂ ಈಶ್ವರಪ್ಪ ಅವರನ್ನು ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನೆ ಸಲುವಾಗಿ ಅವರಿಂದಲೇ “ಬರ ಕುರಿತ ನಿರ್ಣಯ’ ಮಂಡಿಸುವ ತಂತ್ರಗಾರಿಕೆಯನ್ನು ಯಡಿಯೂರಪ್ಪ ಬಣ ಮೆರೆದಿದೆ. ಹಾಗೆಂದ ಮಾತ್ರಕ್ಕೆ ಭಿನ್ನಮತ ಸಂಪೂರ್ಣವಾಗಿ ಶಮನವಾಗಿದೆ ಎಂದಲ್ಲ. ಆಂತರಿಕವಾಗಿ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಫೋಟಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಈ ಮಧ್ಯೆ, ಭಿನ್ನಮತೀಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದ ಆರೋಪ ಎದುರಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್. ಸಂತೋಷ್ ದಿಢೀರ್ ಬೆಳವಣಿಗೆಯಲ್ಲಿ ಶುಕ್ರವಾರ ತುಮಕೂರಿಗೆ ಭೇಟಿ ನೀಡಿ ಸೊಗಡು ಶಿವಣ್ಣ ನಿವಾಸದಲ್ಲಿ ಬೆಂಬಲಿಗರ ಜತೆ ರಹಸ್ಯ ಸಭೆ ನಡೆಸಿದ್ದಾರೆ. ಬಳಿಕ ಶಿವಣ್ಣ ಜತೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ|ಶಿವಕುಮಾರಸ್ವಾಮಿಗಳ ಆಶೀರ್ವಾದ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಇದುವರೆಗೆ ಸಂತೋಷ್ ಅವರು ಸಾರ್ವಜನಿಕವಾಗಿ ಪಕ್ಷದ ಚಟುವಟಿಕೆ/ ಭಿನ್ನಮತೀಯರ ಜತೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಂತೋಷ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಯಡಿಯೂರಪ್ಪ ಬಣ ಆರೋಪ ಮಾಡಿದರೂ ಪ್ರತಿಕ್ರಿಯೆ ಸಹ ನೀಡುತ್ತಿರಲಿಲ್ಲ. ಆದರೆ, ಇದೀಗ ಈ ವಾರದಲ್ಲೇ ಎರಡನೇ ಬಾರಿಗೆ ತುಮಕೂರಿಗೆ ಭೇಟಿ ನೀಡಿ ರಹಸ್ಯ ಸಭೆಯ ನೇತೃತ್ವ ವಹಿಸಿ ಜತೆಗೆ ಸಿದ್ದಗಂಗಾ ಶ್ರೀಗಳ ಆರ್ಶೀವಾದ ಸಹ ಪಡೆದು ತಾನೂ “ಅಖಾಡ’ಕ್ಕೆ ಇಳಿಯುತ್ತಿದ್ದೇನೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗುವಂತೆ ಮಾಡಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯಲ್ಲಿ ಪಕ್ಷದ ಅಸಮಾಧಾನಿತರ ಗುಂಪು ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನಡೆಸು ತ್ತಿರುವ ಚಟುವಟಿಕೆಗಳ ಬಗ್ಗೆಯೂ ಚರ್ಚೆಯಾಗಿ ಗೊಂದಲ ಉಂಟಾಗುವ ಸಾಧ್ಯತೆಯೂ ಇದೆ.
ಶನಿವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಪಕ್ಷ ಸಂಘಟನೆ ಕುರಿತಂತೆ ಗೋಷ್ಠಿ ನಡೆಯಲಿದೆ. ಈ ವೇಳೆ ಪಕ್ಷದೊಳಗಿನ ಅಸಮಾಧಾನ, ಆ ಕುರಿತ ಬೆಳವಣಿಗೆಗಳ ಬಗ್ಗೆಯೂ ಪ್ರಸ್ತಾವವಾಗಬಹುದು. ಸಂತೋಷ್ ವಿರುದ್ಧ ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿರುವುದು, ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ ಅವರನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಅಂಶಗಳೂ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಬಿಎಸ್ವೈ-ಈಶ್ವರಪ್ಪ
ಚರ್ಚೆಗೆ ಅವಕಾಶ?
ಯಡಿಯೂರಪ್ಪ-ಈಶ್ವರಪ್ಪ ಅವರಿಬ್ಬರನ್ನೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವೇಳೆ ಪ್ರತ್ಯೇಕವಾಗಿ ಕೂರಿಸಿ ಪರಸ್ಪರ ಚರ್ಚೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ ಇಬ್ಬರನ್ನೂ ಒಟ್ಟಾಗಿ ಕೂರಿಸಿ ಮಾತುಕತೆಗೆ ಅವಕಾಶ ಮಾಡಿಕೊಟ್ಟರೆ ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿ ಬಳಿಕ ಒಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಗೆ ಆಗಮಿಸುವ ಇಬ್ಬರನ್ನೂ ಒಟ್ಟಾಗಿ ಕೂರಿಸಿ ಪರಸ್ಪರ ಚರ್ಚೆಗೆ ಅವಕಾಶ ಮಾಡಿಕೊಡುವ ಕುರಿತು ಮುರಳೀಧರ ರಾವ್ ಅವರು ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈಶ್ವರಪ್ಪ ಭಾಗವಹಿಸುತ್ತಿರುವುದೇಕೆ?
ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟ ತೀರ್ಮಾನ ಹೇಳದೆ ಅಡ್ಡಗೋಡೆ ಮೇಲೆ ದೀಪ ಇಡುತ್ತಿದ್ದ ಕೆ.ಎಸ್.ಈಶ್ವರಪ್ಪ ಅವರು ಕೊನೇ ಕ್ಷಣದಲ್ಲಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ನಿರ್ಣಯ ಪ್ರಕಟಿಸಿದ್ದು ಮತ್ತು ಅದಕ್ಕಾಗಿ ರಾಯಚೂರಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಭ್ಯಾಸ ವರ್ಗ ಮುಂದೂಡಿರುವುದರ ಹಿಂದೆ ವರಿಷ್ಠರ ಸಂದೇಶ ಕೆಲಸ ಮಾಡಿದೆ ಎನ್ನಲಾಗಿದೆ.
ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರು ಈಶ್ವರಪ್ಪ ಅವರನ್ನು ಸಂಪರ್ಕಿಸಿ ಕಾರ್ಯಕಾರಿಣಿಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದರು. ಅಲ್ಲದೇ, ಸಮಸ್ಯೆ ಬಗೆಹರಿಯುವ ಪ್ರಯತ್ನ ನಡೆಯುತ್ತಿರುವಾಗ ಕಾರ್ಯಕಾರಿಣಿಯಿಂದ ದೂರ ಉಳಿದರೆ ಸಮಸ್ಯೆಯಾಗಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ