ಶೋಭಾಗೆ ದೇಶದ ಕಾನೂನು ಗೊತ್ತಾ?: ಖಾದರ್
Team Udayavani, Jul 23, 2017, 7:35 AM IST
ಬಾಗಲಕೋಟೆ: ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ದೇಶ ಮತ್ತು ರಾಜ್ಯದ ಕಾನೂನು ಗೊತ್ತಿಲ್ಲವೇ ಎಂದು ಆಹಾರ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಎನ್ಐಎ ತನಿಖೆಗೆ ಒತ್ತಾಯಿಸಿ ಸಂಸದೆ ಶೋಭಾ ಪತ್ರ ಬರೆದಿದ್ದಾರೆ. ಅದೇ ರೀತಿ ಹರೀಶ, ವಿನಾಯಕ, ಪ್ರವೀಣ ಅವರ ಪ್ರಕರಣಗಳಲ್ಲೂ ಒತ್ತಾಯಿಸಲಿ. ಮುಖ್ಯವಾಗಿ ಈಶ್ವರಪ್ಪ ಪಿಎ ಅವರ ಮೇಲೆ ಬಿಎಸ್ವೈ ಪಿಎ ಹಲ್ಲೆ ಮಾಡಿಸಿದ ಘಟನೆಯನ್ನೂ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಲು ಒತ್ತಾಯಿಸುತ್ತಾರಾ ಎಂದು ಪ್ರಶ್ನಿಸಿದರು.
ಎನ್ಐಎ ತನಿಖೆ ಅವಶ್ಯವೆನಿಸಿದಾಗ ಸರ್ಕಾರವೇ ವಹಿಸಿದೆ. ಮೈಸೂರು ಚರ್ಚ್ ಬಾಂಬ್ ಸ್ಫೋಟದ ತನಿಖೆ ವಹಿಸಲಾಗಿತ್ತು. ಈ ದೇಶ ಹಾಗೂ ರಾಜ್ಯದ ಆಂತರಿಕ ಭದ್ರತೆಗೆ ಧಕ್ಕೆ ಬಂದಾಗ, ಭಯೋತ್ಪಾದನೆ ಚಟುವಟಿಕೆ ಕುರಿತು ಸಂಶಯ ಬಂದಾಗ ಎನ್ಐಎ ತನಿಖೆ ನಡೆಸಲಾಗುತ್ತದೆ. ಸಂಸದೆ ಶೋಭಾ ಕರಂದ್ಲಾಜೆ ಪ್ರಚಾರಕ್ಕಾಗಿ ಏನೇನೋ ಹೇಳಿಕೆ ಕೊಡಬಾರದು ಎಂದು ಟೀಕಿಸಿದರು.