ಸಂಜೆ ಧರಂ ಸಿಂಗ್ ಅಂತ್ಯಕ್ರಿಯೆ,ಅಂತಿಮ ದರ್ಶನಕ್ಕೆ ಜನಸಾಗರ
Team Udayavani, Jul 28, 2017, 11:37 AM IST
ಕಲಬುರಗಿ: ಗುರುವಾರ ಇಹಲೋಕ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ,ಹಿರಿಯ ಕಾಂಗ್ರೆಸ್ ನಾಯಕ ಧರಂ ಸಿಂಗ್ ಅವರಅಂತ್ಯಕ್ರಿಯೆ ಹುಟ್ಟೂರಾದ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಜಪೂತ ಸಂಪ್ರದಾಯದಂತೆ ನಡೆಯಲಿದೆ.
ಕಲಬುರಗಿಯ ಎನ್ವಿ ಮೈದಾನದಲ್ಲಿ ಅಂತಿಮದರ್ಶನಕ್ಕೆ ಧರಂ ಸಿಂಗ್ ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ಕಂಬನಿ ಮಿಡಿಯುತ್ತಿದ್ದಾರೆ.
ನೇಲೋಗಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ರಜಪೂತ ಸಂಪ್ರದಾಯದಂತೆ ಚಿತಾ ಕುಂಡ ನಿರ್ಮಿಸಲಾಗಿದೆ. ಗಂಧದ ಕಟ್ಟಿಗೆಗಳನ್ನು ತರಿಸಿಕೊಳ್ಳಲಾಗಿದೆ. ಅಂತ್ಯಕ್ರಿಯೆಯ ಉಸ್ತುವಾರಿಯನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ನೋಡಿಕೊಂಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಂಪುಟದ ಎಲ್ಲಾ ಸಚಿವರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ.