‘ಕನ್ನಡೇತರ ಅಧಿಕಾರಿಗಳು ಇಂಗ್ಲೆಂಡ್ನಿಂದ ಉದುರಿದವರಂತೆ ಆಡ್ತಾರೆ’
Team Udayavani, Aug 12, 2017, 9:00 AM IST
ಬೆಂಗಳೂರು: ‘ಕನ್ನಡದ ಅಧಿಕಾರಿಗಳಿಗೆ ಕನ್ನಡದ ಬಗ್ಗೆ ಕೀಳರಿಮೆ, ಕೆಲವು ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಬೇಕಿಲ್ಲ, ಅವರು ಇಂಗ್ಲೆಂಡ್ನಿಂದ ಉದುರಿ ಬಂದವರಂತೆ ಆಡ್ತಾರೆ’ – ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಸಮರ್ಪಕ ಅನುಷ್ಠಾನವಾಗದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಬೇಸರದ ನುಡಿಗಳಿವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಳಿಕ ರಾಜ್ಯಾದ್ಯಂತ ನಿರಂತರ ಪ್ರವಾಸ, ಇಲಾಖೆಗಳಿಗೆ ಭೇಟಿ, ಪರಿಶೀಲನೆಯಲ್ಲಿ ತೊಡಗಿರುವ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು, ಇತ್ತೀಚೆಗೆ ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳು ಬೀದಿಗಿಳಿದಾಗ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವರು.
ರಾಜ್ಯದ ಆಡಳಿತದಲ್ಲಿ ಕನ್ನಡ ಬಳಕೆ ಕುರಿತು ‘ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಕನ್ನಡದ ಅಧಿಕಾರಿಗಳಿಗೆ ಕನ್ನಡದ ಬಗ್ಗೆ ಕೀಳರಿಮೆ ಇರುವುದು, ಕೆಲವು ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಬೇಕಿಲ್ಲದಿರುವ ದೋಷಗಳು ಕನ್ನಡದ ಅನುಷ್ಠಾನಕ್ಕೆ ಅಡ್ಡಿಗಳಾಗಿವೆ. ಇವನ್ನು ಪೀಡೆಗಳು ಅಂತಲೂ ಹೇಳಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಇಲಾಖೆಗಳಲ್ಲಿ ಮುಖ್ಯವಾಗಿ ಕನ್ನಡದ ಅನುಷ್ಠಾನ ಆಗಬೇಕಿದೆ. ಅಭಿವೃದ್ಧಿ ಪ್ರಾಧಿಕಾರ ಬಹಳ ಮುಖ್ಯವಾಗಿ ಮಾಡಬಹುದಾದ ಕೆಲಸ, ಈ ಪರಿಶೀಲನೆ ಎನ್ನುವುದು ಮನವರಿಕೆಯಾಗಿದೆ. ಅದಕ್ಕಾಗಿ ಆದ್ಯತೆಯ ಕರ್ತವ್ಯವಾಗಿ ಇದನ್ನು ತೆಗೆದುಕೊಂಡಿದ್ದೇನೆ. 316 ಕನ್ನಡ ಪರ ಆದೇಶಗಳು ಸರ್ಕಾರದಿಂದ ಆಗಿವೆ. ಇಷ್ಟು ಆದೇಶಗಳಾಗಿದ್ದರೂ ಯಾಕೆ ಅಧಿಕಾರಿಗಳು ಬದಲಾಗಿಲ್ಲ. ಕನ್ನಡ ಅನುಷ್ಠಾನಕ್ಕೆ ಮನಸು ಮಾಡುತ್ತಿಲ್ಲ ಎನ್ನುವುದು ನನಗೆ ಬಹಳ ಕಾಡಿಸಿದೆ ಎಂದು ಹೇಳಿದರು.
ತಂತ್ರಾಂಶದ ಬಳಕೆಯನ್ನೂ ಆದ್ಯತೆಯ ಮೇಲೆ ಬಳಸಬೇಕಿತ್ತು. ವೆಬ್ಸೈಟ್ ಮುಖಪುಟ ಕನ್ನಡವಾಗಬೇಕಿತ್ತು. ಯಾಕೆ ಯಾರೂ ಅದನ್ನು ಮಾಡುತ್ತಿಲ್ಲ. ತಂತ್ರಾಂಶದ ಬಳಕೆ ಬಗ್ಗೆ ಸರ್ಕಾರವೇ ಆದೇಶ ಮಾಡಿದೆ. ಅದರೂ ಅದನ್ನು ಯಾಕೆ ಅನುಷ್ಠಾನ ಮಾಡುತ್ತಿಲ್ಲ? ಅದಕ್ಕೋಸ್ಕರ ಎಲ್ಲ ಇಲಾಖೆಗಳಿಗೆ ಹೋಗಿ ನೋಡಬೇಕು. ಅವರಿಗೆ ಎಚ್ಚರ ಕೊಡಲೇಬೇಕು ಎಂಬುದು ಮನಸಿಗೆ ಅನ್ನಿಸಿ ಸಮರೋಪಾದಿಯಲ್ಲಿ ಈ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಮಾಧ್ಯಮಗಳ ಕಣ್ಣಿಗೆ ನಾನು ಈಗ ಕಾಣಿಸುತ್ತಿದ್ದೇನೆ. ಆದರೆ ನಾನು 15 ಜಿಲ್ಲೆಗಳಿಗೂ ಹೋಗಿ ಜಿಲ್ಲಾಧಿಕಾರಿಗಳ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಅನುಷ್ಠಾನವಾಗಿದೆ ಎಂಬುದನ್ನು ಪರಿಶೀಲಿಸಿದ್ದೇನೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಕನ್ನಡ ಅನುಷ್ಠಾನದ ಕುರಿತು ಇಚ್ಛಾಶಕ್ತಿ ಹೊಂದಿದ್ದಾರೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಕನ್ನಡದ ಬಗೆಗಿನ ಅವರ ಕಾಳಜಿ ಯಾರೂ ಪ್ರಶ್ನಿಸಲಾರದಂತದ್ದು. ಕನ್ನಡವನ್ನು ಅನುಷ್ಠಾನಕ್ಕೆ ತರದ, ಕನ್ನಡದ ಬಗ್ಗೆ ಕಾಳಜಿ ತೋರಿಸದ ಯಾವ ಅಧಿಕಾರಿಯನ್ನೂ ಸರ್ಕಾರ ಕ್ಷಮಿಸೋದಿಲ್ಲ ಎಂದು ಧೈರ್ಯದಿಂದ ಹೇಳಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಧಿಕಾರಕ್ಕೆ ದಂಡನೆಯ ಅಧಿಕಾರ ಕೊಟ್ಟಿದ್ದಿದ್ದರೆ ಅದರ ದುರುಪಯೋಗ ಜಾಸ್ತಿಯಾಗುತ್ತಿತ್ತು. ಸರ್ವಾಧಿಕಾರಿಗಳಾಗಿ ಬಿಡುತ್ತಿದ್ದೆವು. ಆದ್ದರಿಂದ ಶಿಫಾರಸಿಗೆ ಮಿತಿ ಬಳಸುವುದೇ ಒಂದು ದೊಡ್ಡ ಶಕ್ತಿ. ನಮಗೆ ವಿನಯ ಇರಬೇಕು. ವಿನಯ ಇದ್ದಾಗ ಕೆಲಸ ಮಾಡುತ್ತೇವೆ. ಏಕೆಂದರೆ ಕರ್ತವ್ಯ ಪ್ರಜ್ಞೆ ಇರುತ್ತದೆ. ಸರ್ವಾಧಿಕಾರಿ ಧೋರಣೆಯಲ್ಲಲ್ಲ. ಈಗಿರುವ ಮಿತಿ ಆರೋಗ್ಯಕರವಾದದ್ದು ಎಂದು ಹೇಳಿದರು.
ಜಿಲ್ಲಾಮಟ್ಟದಲ್ಲಿ 15 ಜಿಲ್ಲೆಗಳನ್ನು ನಾನು ನೋಡಿದ್ದೇನೆ. ನಡಾವಳಿಗಳನ್ನು ಅನುಪಾಲನ ವರದಿಗಳು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ದೋಷಗಳನ್ನು ಗುರುತಿಸಿ ತಿದ್ದಿಕೊಳ್ಳಲು ಗಡುವು ನೀಡಿದ್ದೇನೆ. ಮುಂದಿನ ಕ್ರಮವಾಗಿ ಅನುಪಾಲನಾ ವರದಿ ತರಿಸಿಕೊಳ್ಳುತ್ತೇವೆ. ಆಮೇಲೆ ಮರು ಪರಿಶೀಲನೆಗೆ ಹೋಗುತ್ತೇವೆ. ಅವರು ಕೊಟ್ಟ ವರದಿ ಸುಳ್ಳಿದ್ದರೆ ಅಲ್ಲಿಯೇ ಅವರಿಗೆ ವಾಗ್ಧಂಡನೆ ಮಾಡುತ್ತೇವೆ ಮತ್ತು ಸರ್ಕಾರಕ್ಕೆ ಮುಂಬಡ್ತಿ ತಡೆ ಹಿಡಿಯಲು ಶಿಫಾರಸು ಮಾಡುತ್ತೇವೆ. ಇಲ್ಲಿವರೆಗೆ 17 ಇಲಾಖೆಗಳಲ್ಲಿ ಪರಿಶೀಲನೆ ಮಾಡಲಾಗಿದ್ದು ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಶೇ. 50ರಷ್ಟು ದಾರಿಗೆ ಬಂದಿದೆ. ತಂತ್ರಾಂಶದ ಬಳಕೆಯಲ್ಲಿ ಅದು ಹೆಚ್ಚು ಕಾಣುತ್ತಿದೆ. ನಾಮಫಲಕಕ್ಕೆ ಸಂಬಂಧಪಟ್ಟಂತೆ ತೀಕ್ಷ್ಣ ಎಚ್ಚರಿಕೆ ಕೊಡಲಾಗಿತ್ತು ಎಂದು ತಿಳಿಸಿದರು.
ನಾವು ಕನ್ನಡ ಕಾವಲು ಸಮಿತಿ ಸೇವಕರು
ಮುಖ್ಯ ಕಾರ್ಯದರ್ಶಿಯವರಿಗೆ ಕಡತಗಳು ಹಾಗೂ ಇತರೆ ಪತ್ರ ವ್ಯವಹಾರಗಳು ಇಂಗ್ಲಿಷ್ನಲ್ಲೇ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ತಡೆಯೊಡ್ಡಬೇಕು. ರಾಜ್ಯದ ಒಳಾಡಳಿತದಲ್ಲಿ ಹೊರ ದೇಶ, ಹೊರ ರಾಜ್ಯಗಳಿಗೆ ಸಂಬಂಧಪಟ್ಟಂತೆ ಅವರು ಇಂಗ್ಲಿಷ್ ಬಳಸಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ಒಳಾಡಳಿತದಲ್ಲಿ ಕನ್ನಡ ಅನುಷ್ಠಾನವಾಗಲೇಬೇಕು. ಅಭಿವೃದ್ಧಿ ಪ್ರಾಧಿಕಾರದೊಳಗಿನ ಮಿತಿಯೊಳಗೆ ನಾವು ಯಾವ ಹಿರಿಯ ಅಧಿಕಾರಿಗಳನ್ನೂ ಬಿಡುವುದಿಲ್ಲ. ಏಕೆಂದರೆ ನಾವು ಕನ್ನಡ ಕಾವಲು ಸಮಿತಿಯ ಸೇವಕರು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
– ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ