ಸಚಿವ ಡಿಕೆಶಿ ಬೆನ್ನಿಗೆ ನಿಂತ ರಾಹುಲ್ ಗಾಂಧಿ
Team Udayavani, Aug 13, 2017, 7:30 AM IST
ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜೊತೆ ಪ್ರತ್ಯೇಕ ಮಾತುಕತೆ
ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ರಾಯಚೂರು ಸಮಾವೇಶಕ್ಕೆ ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಸಮಾವೇಶ ಮುಕ್ತಾಯವಾದ ಬಳಿಕ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜೊತೆಗೆ ಸುಮಾರು ಹದಿನೈದು ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಇತ್ತೀಚೆಗೆ ಶಿವಕುಮಾರ್ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆದಿದ್ದರಿಂದ ಅವರಿಗೆ ನೈತಿಕ ಬೆಂಬಲ ಸೂಚಿಸಿರುವ ರಾಹುಲ್ ಗಾಂಧಿ ಇಡೀ ಪಕ್ಷ ನಿಮ್ಮೊಂದಿಗೆ
ಇದೆ ಧೈರ್ಯದಿಂದ ಇರಿ ಎಂದು ಶಕ್ತಿ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
ಸಂಕಷ್ಟದ ಸಂದರ್ಭದಲ್ಲಿ ಗುಜರಾತ್ ಶಾಸಕರನ್ನು ರೆಸಾರ್ಟ್ನಲ್ಲಿ ಇಟ್ಟುಕೊಂಡು ಅವರಿಗೆ ಆತಿಥ್ಯ ನೀಡಿದ್ದಲ್ಲದೇ ಗುಜರಾತ್ನಲ್ಲಿ ಅಹಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗಲು ಸಹಕರಿಸಿದ್ದಕ್ಕೆ ರಾಹುಲ್ ಬೆನ್ನು ತಟ್ಟಿದ್ದಾರೆ.
ಕೇಂದ್ರ ಸರ್ಕಾರ ಐಟಿ ದಾಳಿ ಮಾಡಿಸುವ ಮೂಲಕ ರಾಜಕೀಯವಾಗಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಬಿಜೆಪಿಯನ್ನು ರಾಜಕೀಯವಾಗಿಯೇ ಎದುರಿಸಬೇಕು. ಅದಕ್ಕೆ ಹೆದರದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದಟಛಿ ರಾಜಕೀಯ ಹೋರಾಟವನ್ನು ತೀವ್ರಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಭವಿಷ್ಯದ ದೃಷ್ಠಿಯಿಂದ 2018ರ ಕರ್ನಾಟಕ ವಿಧಾನ ಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿಯ ರಾಜಕೀಯ ತಂತ್ರಗಳಿಗೆ ಅದೇ ಪ್ರತಿತಂತ್ರದ ಮೂಲಕ ಎದುರಿಸಲು ಸನ್ನದಟಛಿರಾಗಿ ಪಕ್ಷ ಯಾವಾಗಲೂ ನಿಮ್ಮೊಂದಿಗಿದೆ ಎಂದು ಡಿ.ಕೆ.ಶಿವಕುಮಾರ್ಗೆ ರಾಹುಲ್ ಗಾಂಧಿ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
ಐಟಿ ದಾಳಿ ಪ್ರಸ್ತಾಪಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್
ರಾಯಚೂರು: ಇಂಧನ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಐಟಿ ದಾಳಿ ಹಿನ್ನೆಲೆಯಲ್ಲಿ ತಮ್ಮನ್ನು ಸಮರ್ಥನೆ ಮಾಡಿಕೊಂಡರೂ ಇನ್ನುಳಿದ ನಾಯಕರು ಮಾತ್ರ ಅದರ ಬಗ್ಗೆ ಪ್ರಸ್ತಾಪಿಸದೆ ಜಾಣ ನಡೆ ತೋರಿದರು. ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನಾಗಲಿ ನನ್ನ ಕುಟುಂಬವಾಗಲಿ ನೀವು ತಲೆ ತಗ್ಗಿಸುವಂಥ,ನಿಮಗೆ ಅಗೌರವ ತರುವಂತಹ ಕೆಲಸ ಮಾಡಿಲ್ಲ’ ಎಂದರು.
ಆದರೆ, ಡಿಕೆಶಿಗಿಂತ ಮೊದಲು ಮಾತನಾಡಿದ ಕಾಂಗ್ರೆಸ್ ಮುಖಂಡರು, ಆಮೇಲೆ ಭಾಷಣ ಮಾಡಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಖರ್ಗೆ ಸೇರಿ ಯಾರೊಬ್ಬರೂ ಐಟಿ ದಾಳಿ ಪ್ರಸ್ತಾಪಿಸಲಿಲ್ಲ . ಕೆಲ ದಿನಗಳಿಂದ ಇದೊಂದು ರಾಜಕೀಯ ಷಡ್ಯಂತ್ರ ಎಂದು ಜರಿದಿದ್ದ ನಾಯಕರೆಲ್ಲ ಮೌನಕ್ಕೆ ಶರಣಾಗಿದ್ದು ಅಚ್ಚರಿ ಮೂಡಿಸಿತು.