ದೇಗುಲಗಳಲ್ಲಿ ವಸ್ತ್ರ ಸಂಹಿತೆ!; ಜಾರಿ ಮಾಡುತ್ತಾ ರಾಜ್ಯ ಸರ್ಕಾರ ?
Team Udayavani, Sep 24, 2017, 2:41 PM IST
ಬೆಂಗಳೂರು : ರಾಜ್ಯದಲ್ಲಿ ರುವ ಮಜರಾಯಿ ದೇಗುಲಗಳಲ್ಲಿ ಇನ್ಮುಂದೆ ಜೀನ್ಸ್, ಟೀ ಶರ್ಟ್ ಧರಿಸುವುದಕ್ಕೆ ನಿಷೇಧ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎನ್ನಲಾಗಿದೆ.
ಸಂಪೂರ್ಣ ಪಾಶ್ಚಿಮಾತ್ಯ ಶೈಲಿಯ ಉಡುಪು ಧರಿಸಿ ಬರುವುದರಿಂದ ಸಾಂಪ್ರದಾಯಿಕ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದ ರಾಜ್ಯ ಧಾರ್ಮಿಕ ಪರಿಷತ್ ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಕ್ಟೋಬರ್ 3 ರಂದು ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಪುರುಷರು ಪಂಚೆ,ಶರ್ಟ್, ಸಾಮಾನ್ಯ ಪ್ಯಾಂಟ್ ಶರ್ಟ್ ಧರಿಸಲು ಅವಕಾಶವಿದ್ದು, ಮಹಿಳೆಯರು ಸೀರೆ , ಚೂಡಿದಾರ್ ಧರಿಸಲು ವಸ್ತ್ರ ಸಂಹಿತೆಯಲ್ಲಿ ಅವಕಾಶವಿದೆ ಎನ್ನಲಾಗಿದೆ.
ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ಮಾತ್ರವಲ್ಲದೆ ಅರ್ಚಕ ಮತ್ತು ಸಿಬಂದಿಗಳಿಗೂ ಪ್ರತ್ಯೇಗ ವಸ್ತ್ರ ಸಂಹಿತೆ ಜಾರಿ ಮಾಡುವ ಸಾಧ್ಯತೆಗಳಿವೆ.
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಮತ್ತು ಕೇರಳದಲ್ಲಿನ ದೇಗುಲಗಳಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡಲು ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ತಿರುವನಂತಪುರಂ ಅನಂತಪದ್ಮನಾಭಸ್ವಾಮಿ ದೇಗುಲ ಮತ್ತು ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಪರ ವಿರೋಧದ ಚರ್ಚೆಗಳು ನಡೆದಿದೆ.