ಉದ್ಯೋಗ ಕೊಡಿಸುವುದಾಗಿ ವಂಚಿಸುವ ಏಜೆನ್ಸಿಗಳ ಮೇಲೆ ನಿಗಾ
Team Udayavani, Sep 25, 2017, 8:01 AM IST
ಬೆಂಗಳೂರು: ಹೊರದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಅಮಾಯಕರನ್ನು ವಂಚಿಸುವ ಖಾಸಗಿ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಖಾಸಗಿ ಏಜೆನ್ಸಿಯೊಂದು ಉಡುಪಿಯ ಜೆಸಿಂತಾ ಅವರನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವರು, ಇಂತಹ ವಂಚಕ ಏಜೆನ್ಸಿಗಳ ಮೇಲೆ ನಿಗಾ ಇಡುವುದಲ್ಲದೇ ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ.
ಉಡುಪಿ ಮೂಲದ ಜೆಸಿಂತಾ (46) ಉದ್ಯೋಗದ ಹುಡುಕಾಟದಲ್ಲಿದ್ದಾಗ ಮುಂಬೈ ಮೂಲದ ಏಜೆನ್ಸಿಯೊಂದು ಅವರಿಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಲ್ಲಿಗೆ ಕರೆದುಕೊಂಡು ಹೋಗಿತ್ತು. ಉದ್ಯೋಗ ಕೊಡಿಸುವ ಬದಲು ಸೌದಿಯ ಮಂತನೊಬ್ಬನಿಗೆ 5 ಲಕ್ಷ ರೂ.ಗೆ ಜೆಸಿಂತಾ ಅವರನ್ನು ಮಾರಾಟ ಮಾಡಿತ್ತು. ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ. ರವೀಂದ್ರನಾಥ್ ಶ್ಯಾನುಭಾಗ್ ಅವರ ಸತತ 9 ತಿಂಗಳ ಪ್ರಯತ್ನ, ಕೇಂದ್ರ ಸರ್ಕಾರ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಕನ್ನಡ ಸಂಘಟನೆಗಳ ನೆರವಿನಿಂದ ಜೆಸಿಂತಾ ಅವರನ್ನು ರಕ್ಷಿಸಲಾಗಿತ್ತು.