ನಿಖೀಲ್ ಸ್ಟಾರ್ ಕ್ಯಾಂಪೇನರ್, ಪ್ರಜ್ವಲ್ ಲೋಕಸಭಾ ಅಭ್ಯರ್ಥಿ
Team Udayavani, Oct 14, 2017, 7:25 AM IST
ಹಾಸನ: ಜೆಡಿಎಸ್ನಲ್ಲಿ ಚಿತ್ರನಟ ನಿಖೀಲ್ಗೆ ಸ್ಟಾರ್ ಕ್ಯಾಂಪೇನ್ ಜವಾಬ್ದಾರಿ, ಪ್ರಜ್ವಲ್ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಇಂಗಿತವನ್ನು ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಖೀಲ್ ಅವರ ಸಿನಿಮಾ ಚರಿಷ್ಮಾವನ್ನು ಪಕ್ಷಕ್ಕೆ ಬಳಸಿಕೊಳ್ಳಲಾಗುವುದು. ಎಚ್. ಡಿ.ಕುಮಾರಸ್ವಾಮಿ ಅವರ ಪರವಾಗಿ ಅವರ ಮಗ ನಿಖೀಲ್ ರಾಜಕೀಯದಲ್ಲಿ ಹೆಗಲು ಕೊಡುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದ ನೆರವಿಗೆ ನಿಖೀಲ್ ಬರುವುದಿದ್ದರೆ ಸಂತೋಷ ಎಂದರು.
ಇನ್ನೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ,ಈಗಾಗಲೇ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ನಾಲ್ವರು ಸ್ಥಳೀಯರು ಟಿಕೆಟ್ ಕೋರಿ ಅರ್ಜಿ ಹಾಕಿದ್ದಾರೆ. ಅದರಲ್ಲಿ ಪ್ರಜ್ವಲ್ ಅರ್ಜಿ ಇಲ್ಲ. ಹೀಗಾಗಿ, ಸ್ಥಳೀಯರನ್ನೇ ಪರಿಗಣಿಸಬೇಕಾಗಿದೆ ಎಂದು ಹೇಳುವ ಮೂಲಕ ರಾಜರಾಜೇಶ್ವರಿ
ಕ್ಷೇತ್ರದಲ್ಲಿ ಪ್ರಜ್ವಲ್ ಸ್ಪರ್ಧೆಯನ್ನು ಪರೋಕ್ಷವಾಗಿ ತಳ್ಳಿ ಹಾಕಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದಲ್ಲಿ ಲೋಕಸಭೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕೊರತೆ ಇದೆ. ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಸಮ್ಮತಿಸಿದರೆ ಪ್ರಜ್ವಲ್ ಅವರನ್ನು ಸ್ಪರ್ಧೆಗಿಳಿಸುವ ಉದ್ದೇಶವಿದೆ. ಆತನಿಗೆ ಲೋಕಸಭೆಯಲ್ಲಿ ಮಾತನಾಡುವ ಛಾತಿಯೂ ಇದೆ ಎಂದು ಹೇಳಿದರು.