ಸಂಪರ್ಕ ಸೇತುವೆ ಕುಸಿದು ಹಳ್ಳದಲ್ಲಿ ಸಿಲುಕಿದ ಲಾರಿ
Team Udayavani, Oct 16, 2017, 10:56 AM IST
ಕೆ.ಆರ್.ಪೇಟೆ: ಲಾರಿ ಸಂಚರಿಸುತ್ತಿದ್ದ ವೇಳೆ ಶಿಥಿಲಾವಸ್ಥೆಯ ಸೇತುವೆಯೊಂದು ಕುಸಿದ ಪರಿಣಾಮ ಲಾರಿ ಮಗುಚಿ ಸುಮಾರು 15 ಚೀಲ ಅಕ್ಕಿ ನೀರು ಪಾಲಾದ ಘಟನೆ ನಡೆದಿದೆ. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದ್ದು ಅವಘಡ ಸಂಭವಿಸಿದೆ.
ಭಾನುವಾರ ಬೆಳಗ್ಗೆ ನಾಯಕನ ಹಳ್ಳಿಗೆ ಪಡಿತರ ಅಕ್ಕಿ ಮೂಟೆಗಳನ್ನು ಸಾಗಿಸುತ್ತಿದ್ದ ಟಿಎಪಿಸಿಎಂಎಸ್ ಸಂಸ್ಥೆಗೆ ಸೇರಿದ ಲಾರಿ, 100 ಮೂಟೆ ಅಕ್ಕಿ ಚೀಲಗಳನ್ನು ತುಂಬಿಕೊಂಡು ಸಾಗಿತ್ತು, ಶನಿವಾರ ರಾತ್ರಿಯಿಂದಲೂ ಸುರಿಯುತ್ತಿರುವ ಮಳೆಗೆ ಸಂಪರ್ಕ ಸೇತುವೆ ಮೇಲೆ ನೀರು ಹರಿಯು ತ್ತಿತ್ತು. ಅಲ್ಲದೆ ಮೊದಲೇ ಸೇತುವೆ ಕೂಡ ಬಿರುಕು ಬಿಟ್ಟಿದ್ದು, ಲಾರಿ ಚಾಲಕನಿಗೆ ಶಿಥಿಲಾ ವಸ್ಥೆಯ ವಿಷಯ
ತಿಳಿಯದೆ ಇದೇ ಮಾರ್ಗವಾಗಿ ಸಾಗಿದ್ದಾನೆ. ಲಾರಿ ಭಾರಕ್ಕೆ ಸೇತುವೆ ಲಾರಿ ಸಮೇತ ಕುಸಿದು ಬಿದ್ದು ಹಳ್ಳದಲ್ಲಿ ಸಿಲುಕಿದೆ. ಲಾರಿ ಮಗುಚಿ ಬೀಳದೆ ನಿಂತ ಪರಿಣಾಮ ಅನಾಹುತ ತಪ್ಪಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಓರೆಯಾಗಿ ನೀರಿನಲ್ಲಿ ನಿಂತ ಕಾರಣ ಲಾರಿಯೊಳಗಿದ್ದ 100 ಚೀಲ ಅಕ್ಕಿಮೂಟೆಗಳ ಪೈಕಿ 15 ಮೂಟೆ ಅಕ್ಕಿ ನೀರು ಪಾಲಾಗಿದೆ. ಘಟನೆ ನಂತರ ಉಳಿದ ಅಕ್ಕಿ ಮೂಟೆಗಳನ್ನು ಮತ್ತೂಂದು ಲಾರಿಯಲ್ಲಿ ಸುರಕ್ಷಿತವಾಗಿ ಸಾಗಿಸಲಾಯಿತು. ಘಟನೆ ಯಿಂದ ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ.