ದಲಿತರ ಪರ ಕಾಂಗ್ರೆಸ್ ಬದ್ಧತೆ ಎಚ್ಡಿಕೆ ಸರ್ಟಿಫಿಕೇಟ್ ಬೇಕಿಲ್ಲ
Team Udayavani, Dec 3, 2017, 6:30 AM IST
ಬೆಂಗಳೂರು: ದಲಿತರು ಹಾಗೂ ಅಲ್ಪ ಸಂಖ್ಯಾಕರ ಕುರಿತ ಕಾಂಗ್ರೆಸ್ ಬದ್ಧತೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಕರಾಗಿ ಸಹಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ದಲಿತರು ಹಾಗೂ ಅಲ್ಪ ಸಂಖ್ಯಾಕರು ಮತ್ತು ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ದಲಿತರು ಮತ್ತು ಅಲ್ಪ ಸಂಖ್ಯಾಕರಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದಲೇ ದಲಿತರ ಶೈಕ್ಷಣಿಕ ಮಟ್ಟ ಶೇಕಡಾ 68ಕ್ಕೆ ಏರಿದೆ. ಕಾಂಗ್ರೆಸ್ ಪಕ್ಷ ಬಡವರು ಮತ್ತು ಅಲ್ಪ ಸಂಖ್ಯಾಕರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು ಎಂದರು.
ಸಿದ್ದರಾಮಯ್ಯ ಆಪರೇಷನ್ ಕಮಲ ಮಾಡಲು ಬಿಜೆಪಿಯವರಿಗೆ ಸಹಕಾರ ನೀಡಿದ್ದರು ಹಾಗೂ ಖರ್ಗೆ ಮತ್ತು ಪರಮೇಶ್ವರ್ ಅವರನ್ನು ತುಳಿದು ಮೇಲೆ ಬಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಏನೇನು ಮಾಡಿದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಲಿ ಎಂದು “ಟಾಂಗ್’ ನೀಡಿದರು.