ಬೆಳಗಾವಿಲಿ ಸಪ್ತಪದಿ ತುಳಿದ ಎಚ್ಐವಿ ಪೀಡಿತ ಜೋಡಿ
Team Udayavani, Dec 5, 2017, 2:54 PM IST
ಬೆಳಗಾವಿ: ನಗರದಲ್ಲಿ ಎಚ್ಐವಿ ಪಾಸಿಟಿವ್ ಜೋಡಿ ಯೊಂದು ಹಸೆಮಣೆಏರುವ ಮೂಲಕ ಎಚ್ಐವಿ ಪೀಡಿತರಿಗೆ ಜೀವನೋತ್ಸಹದ ಕುರುಹಾಗಿ ಗೋಚರಿಸಿದ್ದಾರೆ.
ಇಲ್ಲಿಯ ರೈಲ ನಗರದಲ್ಲಿರುವ ಸ್ಪಂದನ ನಂದನ ಮಕ್ಕಳ ಧಾಮದಲ್ಲಿರುವ ಯುವತಿ ಎಚ್ಐವಿಯಿಂದ ಬಳಲುತ್ತಿದ್ದಳು. ಕೊನೆಗೂ ಈಕೆಗೆ ಕಂಕಣಬಲ ಕೂಡಿ ಬಂದಿದೆ.
ಸೋಮವಾರ ಹಿಂದೂ ಸಂಪ್ರದಾಯದ ಪ್ರಕಾರ ಗಟ್ಟಿಮೇಳ,ಮಂತ್ರಘೋಷಗಳ ಮೂಲಕ ಮದುವೆ ನಡೆದಿದೆ. ಅನೇಕರು ಕುಟುಂಬ ಸಮೇತ ಆಗಮಿಸಿ ದಂಪತಿಗೆ ಶುಭ ಹಾರೈಸಿದರು. ಮದುವೆ ಕಾರ್ಯಕ್ರಮ ಅದ್ಧೂರಿ ಅಲ್ಲದಿದ್ದರೂ ಇಬ್ಬರು ಎಚ್ಐವಿ ಪೀಡಿತ ಯುವಕ-ಯುವತಿ ಹಸೆಮಣೆಗೆ ಏರಿದ್ದೇ ವಿಶೇಷವಾಗಿತ್ತು.
ಭವಿಷ್ಯ ಬದಲಿಸಿದ ಧಾಮ: ಹಲವು ವರ್ಷಗಳಿಂದ ಎಚ್ಐವಿ ಪೀಡಿತಳಾಗಿದ್ದ ಯುವತಿಯ ಬೆನ್ನೆಲುಬಾಗಿ ನಿಂತ ಸ್ಪಂದನ ನಂದನ ಮಕ್ಕಳ ಧಾಮ ಎಚ್ಐವಿ ಪೀಡಿತ ಯುವಕನನ್ನು ಹುಡುಕಿ ವಿವಾಹ ಮಾಡಿಸಿದೆ.
ಜಮಖಂಡಿಯ ಯುವಕ ವಧುವಿಗೆ ತಾಳಿ ಕಟ್ಟುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾನೆ. ಅಲ್ಲಿಯೇ ಉದ್ಯೋಗ ಮಾಡಿಕೊಂಡು ಜೀವನಸಾಗಿಸುತ್ತಿರುವ ಈ ಯುವಕನ ಜೀವನದಲ್ಲೂ ಹೊಸಬೆಳಕು ಮೂಡಿದೆ.
ಯುವತಿ ದ್ವಿತೀಯ ಪಿಯು ಓದಿದ್ದು, ಯುವಕ ಉದ್ಯೋಗ ಮಾಡಿಕೊಂಡು ಜೀವನ ಸಾಗಿ ಸುತ್ತಿದ್ದಾನೆ.
ಭೈರೋಬಾ ಕಾಂಬಳೆ