ಪ್ರತ್ಯೇಕ ಧರ್ಮ: ಬಿಜೆಪಿಗರಿಗೆ ಒಲವಿದ್ದರೂ ಮೌನಕ್ಕೆ ಶರಣು
Team Udayavani, Dec 12, 2017, 6:45 AM IST
ಸಂಕೇಶ್ವರ: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರಕ್ಕೆ ಬೆಂಬಲ ನೀಡಲು ಬಿಜೆಪಿಯ ಬಹಳಷ್ಟು ಶಾಸಕರಿಗೆ ಒಲವು ಇದ್ದರೂ ಉಮೇಶ ಕತ್ತಿ ಅವರು ಹೇಳಿದ ಹಾಗೆ ಅಂಥ ಭಾವನೆಗಳನ್ನು ಅವರು ಹಿಡಿದಿಟ್ಟುಕೊಂಡಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಹೇಳಿದರು.
ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ಸುದ್ದಿಗಾರರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಬಹಳಷ್ಟು ಬಿಜೆಪಿ ಶಾಸಕರು ನಮ್ಮ ಹುಬ್ಬಳ್ಳಿ , ಕಲಬುರಗಿ, ವಿಜಯಪುರ ರ್ಯಾಲಿಗೆ ತನು ಮನ ಧನದಿಂದ ಸಹಾಯ ಮಾಡಿದ್ದಾರೆ. ಆದರೆ ಅವರ ಹೆಸರು ಹೇಳಲು ನಾನು ಇಚ್ಛೆ ಪಡುವುದಿಲ್ಲ. ಅವರ ಹೆಸರು ಹೇಳಿದರೆ ಮತ್ತೆ ಅವರಿಗೆ ಬಿಜೆಪಿ ಟಿಕೆಟ್ ತಪ್ಪುತ್ತದೆ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಬಿಜೆಪಿಯವರು ಬೆಂಬಲ ನೀಡಿದರೆ ಟಿಕೆಟ್ ಕೈ ತಪ್ಪುತ್ತೆ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳುತ್ತಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕರು ಮತ್ತು ಪರಿಷತ್ ಸದಸ್ಯರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.