ಸಾಧನಾ ಸಂಭ್ರಮಕ್ಕೆ “ರಾಜ್ಯ ಸರ್ಕಾರವೇ ಶಿಫ್ಟ್’
Team Udayavani, Dec 16, 2017, 10:08 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ “ಸಾಧನಾ ಸಂಭ್ರಮ’ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸರ್ಕಾರವೇ ವಿಧಾನಸೌಧದಿಂದ “ಶಿಫ್ಟ್’ ಆದಂತಾಗಿದೆ. ಮುಖ್ಯಮಂತ್ರಿಯವರು ಅತ್ತ ಸಾಧನಾ ಸಂಭ್ರಮದಲ್ಲಿರುವುದರಿಂದ ಇತ್ತ ವಿಧಾನಸೌಧದತ್ತ ಸಚಿವರು ಸುಳಿಯುತ್ತಲೇ ಇಲ್ಲ. ಆಗೊಮ್ಮೆ- ಈಗೊಮ್ಮೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ
ಎಚ್.ಆಂಜನೇಯ ಸೇರಿ ಮೂರ್ನಾಲ್ಕು ಸಚಿವರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಿಟ್ಟರೆ 2 ಡಜನ್ಗೂ ಅಧಿಕ ಸಚಿವರು ಇತ್ತ ತಲೆ ಹಾಕುತ್ತಿಲ್ಲ. ವಿಧಾನಸೌಧ-ವಿಕಾಸಸೌಧಕ್ಕೆ ಸಚಿವರನ್ನು ಹುಡುಕಿಕೊಂಡು ಬಂದವರಿಗೆ “ಸಾಹೇಬ್ರು ಕ್ಷೇತ್ರ ಪ್ರವಾಸ’ದಲ್ಲಿದ್ದಾರೆ. “ಸಾಹೇಬ್ರು ಸಿಎಂ ಅವರ ಪ್ರೋಗ್ರಾಂ’ನಲ್ಲಿದ್ದಾರೆ ಎಂಬ ಸಿದ್ಧ ಉತ್ತರ ದೊರೆಯುತ್ತಿದೆ.
ಮುಖ್ಯಮಂತ್ರಿಯವರು ಸಾಧನಾ ಸಂಭ್ರಮ ಯಾತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯೂ ನಡೆಯುತ್ತಿರುವುದರಿಂದ ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಯಾತ್ರೆಯಲ್ಲೇ ಇರಬೇಕಾಗಿದೆ.
ಜತೆಗೆ ಆಯಾ ಜಿಲ್ಲಾಡಳಿತ ಯಾತ್ರೆಯಲ್ಲೇ ಮಗ್ನವಾಗಿದೆ. ಬೀದರ್ನಲ್ಲಿ ಸಾಧನಾ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರು ಸಚಿವರು ಉಪಸ್ಥಿತರಿದ್ದರು. ನಂತರ 2ನೇ ಹಾಗೂ 3ನೇ ದಿನದ ಪ್ರತಿ ಕಾರ್ಯಕ್ರಮದಲ್ಲಿ ಒಬ್ಬರು ಅಥವಾ ಇಬ್ಬರು ಸಚಿವರು ಹಾಜರಾಗುತ್ತಿದ್ದಾರೆ.
ಮುಖ್ಯಮಂತ್ರಿ, ಸಚಿವರು, ಶಾಸಕರು ವಿಧಾನಸೌಧ-ವಿಕಾಸಸೌಧದತ್ತ ಬಾರದ ಕಾರಣ ಸಿಎಸ್ ರತ್ನಪ್ರಭಾ ಹೊರತುಪಡಿಸಿದರೆ ಇಲಾಖೆಗಳ ಉನ್ನತ ಅಧಿಕಾರಿಗಳು ರಿಲಾಕ್ಸ್ “ಮೂಡ್’ನಲ್ಲಿದ್ದು ಶಕ್ತಿಸೌಧ ಖಾಲಿ ಖಾಲಿಯಾಗಿದ್ದು ಒಟ್ಟಾರೆ ಆಡಳಿತ ಯಂತ್ರ ಒಂದು ರೀತಿ ಸ್ಥಗಿತಗೊಂಡಂತಾಗಿದೆ. ಈ ಕುರಿತು ಪ್ರಶ್ನಿಸಬೇಕಾದ ಪ್ರತಿಪಕ್ಷ ನಾಯಕರು ಮೌನವಹಿಸಿದ್ದು, ಬಿಜೆಪಿ ಶಾಸಕರು ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಯಲ್ಲಿ ಮುಳುಗಿದ್ದು, ಅವರೂ ವಿಧಾನಸೌಧದತ್ತ ಬರುವುದು ಕಡಿಮೆಯಾಗಿದೆ. ಮತ್ತೂಂದೆಡೆ ಜೆಡಿಎಸ್ನ ಕುಮಾರಸ್ವಾಮಿ ನಿರಂತರ ಪ್ರವಾಸ, ಸಭೆ, ಸಮಾವೇಶಗಳನ್ನು ನಡೆಸು ತ್ತಿರುವುದರಿಂದ ಜೆಡಿಎಸ್ ಶಾಸಕರು ಅತ್ತ ಗಮನಹರಿಸಿದ್ದಾರೆ. ಸಾಧನಾ ಸಂಭ್ರಮ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಅತ್ತ “ಶಿಫ್ಟ್’ ಆಗಿರುವ ಬಗ್ಗೆ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಸಿಎಂ ಬೆಂಗಳೂರಿನಲ್ಲಿ ಇಲ್ಲದಿದ್ದರೂ ನಿತ್ಯ ಜನತಾದರ್ಶನ ನಡೆಸಿ ಸಾರ್ವಜ ನಿಕರಿಂದ
ಅಹವಾಲು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿ ಹೊರತುಪಡಿ ಸಿದರೆ ಉಳಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರು ವಂತೆ ಸೂಚಿಸಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ.
ಚುನಾವಣಾ “ಮೂಡ್’
ಡಿ.13 ರಂದು ಸಿಎಂ ಸಿದ್ದರಾಮಯ್ಯ ಆರಂಭಿಸಿರುವ ಸಾಧನಾ ಸಂಭ್ರಮ ಯಾತ್ರೆ ಒಂದು ತಿಂಗಳ ಕಾಲ ಸಂಚರಿಸಲಿದೆ. ಮತ್ತೂಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ನ.2 ರಂದು ಪ್ರಾರಂಭಗೊಂಡಿದ್ದು ಜ.28 ರವರೆಗೆ ನಡೆಯಲಿದೆ. ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಯೂ ನಡೆಯುತ್ತಿದೆ. ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರ ಸಹಿತ ಮೂರೂ ಪಕ್ಷಗಳ ನಾಯಕರು, ಶಾಸಕರು, ಕಾರ್ಯಕರ್ತರು, ಮುಖಂಡರು ಚುನಾವಣಾ “ಮೂಡ್’ನಲ್ಲಿರುವುದರಿಂದ ಅಧಿಕಾರಿ ವಲಯವೂ ಸಹಜವಾಗಿ ಚುನಾವಣೆ
ನಡೆದು ಹೊಸ ಸರ್ಕಾರ ಬಂದ ಮೇಲೆ ನೋಡೋಣ ಎಂಬ ಮನಸ್ಥಿತಿಗೆ ತಲುಪಿದಂತಾಗಿದೆ.
●ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?