ಒಗ್ಗೂಡಿಸುವ ಪಕ್ಷ ಬೆಂಬಲಿಸೋಣ: ಉಜ್ಜಯಿನಿ ಶ್ರೀ
Team Udayavani, Dec 25, 2017, 7:00 AM IST
ಗದಗ: ವೀರಶೈವ ಲಿಂಗಾಯತ ಕುರಿತು ಪ್ರತ್ಯೇಕ ಧರ್ಮದ ಗೊಂದಲ ಹುಟ್ಟು ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ಬರಲಿರುವ ಚುನಾವಣೆಯಲ್ಲಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸುವ ಪಕ್ಷವನ್ನು ಬೆಂಬಲಿಸೋಣ ಎಂದು ಉಜ್ಜಯಿನಿ ಜಗದ್ಗುರು ಮರುಳಸಿದ್ಧ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ವೀರಶೈವ ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಅಂಗೈಯಲ್ಲಿರುವ ಐದು ಬೆರಳುಗಳು ನಾನು ಶ್ರೇಷ್ಠ ಎಂಬ ಗುದ್ದಾಟದಲ್ಲಿ ನಿರತವಾಗಿವೆ. ಅವುಗಳಿಗೆ ಅಂಗೈ ಮುಖ್ಯ ಎನ್ನುವ ಜ್ಞಾನವೂ ಇಲ್ಲ. ತಿಳಿವಳಿಕೆ ನೀಡುವ ಸಮಾವೇಶ ಇದಾಗಿದೆ ಎಂದು ಬಣ್ಣಿಸಿದರು.
ವೀರಶೈವ ಲಿಂಗಾಯತರಲ್ಲಿ ಸಮಷ್ಠಿ ಪ್ರಜ್ಞೆ ಜಾಗೃತವಾದರೆ ಮಾತ್ರ ಏಕತೆ ಸಾಧ್ಯ. ಈಗ ಏಕತೆ ಸಾರುವ ಕಾಲ ಬಂದಿದೆ. ಮುಂದೆ ಒಂದಾಗುವ ಕಾಲವೂ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.