ಲಿಂಗಾಯತ, ವೀರಶೈವ ಪ್ರತ್ಯೇಕ: ಚರ್ಚೆಗೆ ಅಖಾಡ ಸಿದ್ಧ
Team Udayavani, Dec 29, 2017, 6:25 AM IST
ಹುಬ್ಬಳ್ಳಿ: ಲಿಂಗಾಯತ, ವೀರಶೈವ ಪ್ರತ್ಯೇಕ ಎಂಬುದರ ಕುರಿತಾಗಿ ದಾಖಲೆ ಸಮೇತ ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯೊಂದಿಗೆ ಚರ್ಚಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ತಾವು ಸೇರಿ ಒಟ್ಟು ಆರು ಜನರ ತಂಡವನ್ನು ಘೋಷಿಸಿದ್ದಾರೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಮೂರುಸಾವಿರ ಮಠದಲ್ಲಿ ನಡೆಯುವ ಚರ್ಚೆಗೆ ತಮ್ಮ ತಂಡದಲ್ಲಿ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಡಾ.ವೀರಣ್ಣ ರಾಜೂರ, ಡಾ.ರಂಜಾನ್ ದರ್ಗಾ, ಡಾ. ಮಹದೇವಪ್ಪ, ವಿಶ್ವರಾಧ್ಯ ಸತ್ಯಂಪೇಟೆ ಅವರು ಇದ್ದಾರೆ ಎಂದು ತಿಳಿಸಿದ್ದಾರೆ. ದಿಂಗಾಲೇಶ್ವರ ಸ್ವಾಮಿಗಳು ವೀರಶೈವ
ಧರ್ಮದ ಪ್ರತಿಪಾದನೆಗೆ ದಾಖಲೆಗಳೊಂದಿಗೆ ಹಾಜರಾಗುವ ಐವರ ಹೆಸರನ್ನು ತಿಳಿಸಬೇಕು ಎಂದು ಹೊರಟ್ಟಿ ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ: ಚರ್ಚೆಯ ಹಿನ್ನೆಲೆಯಲ್ಲಿ ಗುರುವಾರ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಬಸವರಾಜ ಹೊರಟ್ಟಿ ಹಾಗೂ ಇನ್ನಿತರರು ಚರ್ಚೆ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಖಾಸಗಿ ಸುದ್ದಿವಾಹಿನಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಲಿಂಗಾಯತ ಹಾಗೂ ವೀರಶೈವರು ಬೇರೆ ಎನ್ನುವುದನ್ನು ಪ್ರತಿಪಾದಿಸಿದ್ದೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಲು ವೇದಿಕೆ ಸಿದಟಛಿಪಡಿಸುತ್ತೇನೆ. ಚರ್ಚೆ ಆಗಮಿಸುವಂತೆ ಆಹ್ವಾನ ನೀಡಿದೆ. ಅದರಂತೆ ಮೂರುಸಾವಿರ ಮಠದಲ್ಲಿ ಚರ್ಚೆಗೆ
ವೇದಿಕೆ ಸಿದಟಛಿಪಡಿಸಿದ್ದೇನೆ ಎಂದು ತಿಳಿಸಿದರು. ಬಹಿರಂಗ ಸಭೆ ನಡೆಸಿದರೆ ಜನರನ್ನು ನಿಯಂತ್ರಿಸುವುದು ಕಷ್ಟ. ಹೀಗಾಗಿ ಶನಿವಾರ ಬೆಳಗ್ಗೆ 11 ಗಂಟೆಗೆ ಆಂತರಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಕಡೆಯಿಂದ ನಾನು ಹಾಗೂ ಐವರು. ದಿಂಗಾಲೇಶ್ವರ ಶ್ರೀಗಳು ಹಾಗೂ ಅವರ ಕಡೆಯಿಂದ ಐವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೀರಶೈವರು ಮತ್ತು ಲಿಂಗಾಯತ ಎರಡು ಒಂದೇ ಎಂದು ಸಾಬೀತುಪಡಿಸಿದರೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೈ ಬಿಡುವುದಾಗಿ ಸವಾಲು ಹಾಕಿದರು.