ಮಹದಾಯಿಗಾಗಿ ನರಗುಂದ ಮತ್ತೆ ಬಂದ್
Team Udayavani, Jan 4, 2018, 6:25 AM IST
ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿನ ಕಾಂಗ್ರೆಸ್ ನಿಲುವು ಖಂಡಿಸಿ ಬುಧವಾರ ಬಿಜೆಪಿ ಕರೆ ನೀಡಿದ್ದ ನರಗುಂದ ಬಂದ್ಗೆ ಉತ್ತಮ ಸ್ಪಂದನೆ ದೊರೆಯಿತು.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಬಸ್ ಸಂಚಾರ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳು ಅಘೋಷಿತ ರಜೆ ಎದುರಿಸಬೇಕಾಯಿತು. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಮಿಸಬೇಕಿದ್ದ ಸಿಬ್ಬಂದಿ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸಬೇಕಾಯಿತು. ವ್ಯಾಪಾರಸ್ಥರ ಬೆಂಬಲದಿಂದಾಗಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ಸ್ಥಗಿತಗೊಂಡಿದ್ದವು. ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಇದೇ ವೇಳೆ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮಲಪ್ರಭಾ, ಮಹದಾಯಿ ಕೇಂದ್ರ ಒಕ್ಕೂಟ ಸಮಿತಿಯವರು ಬುಧವಾರ ಹುಬ್ಬಳ್ಳಿ ಹೊರವಲಯದ ಗಬ್ಬೂರ ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ನಂ.4ರಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.