ಮಹದಾಯಿಗಾಗಿ ಮತ್ತೆ ಜನವರಿ 27ರಂದು ಕರ್ನಾಟಕ ಬಂದ್; ವಾಟಾಳ್
Team Udayavani, Jan 10, 2018, 2:35 PM IST
ಬೆಂಗಳೂರು: ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಜನವರಿ 27ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಬಂದ್ ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಅಲ್ಲದೇ ಕರ್ನಾಟಕ ಬಂದ್ ದಿನವೇ ಬೃಹತ್ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ವಾಟಾಳ್ ನಾಗರಾಜ್ ಹೇಳಿದರು. ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 15 ದಿನಗಳಲ್ಲಿಯೇ ಮಹದಾಯಿ ವಿವಾದ ಬಗೆಹರಿಸುವುದಾಗಿ ನೀಡಿರುವ ವಾಗ್ದಾನ ಪೂರೈಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರು ಅಹೋರಾತ್ರಿ ಧರಣಿ ನಡೆಸಿದ್ದರು.
ಮಹದಾಯಿ ಹೋರಾಟಗಾರರ ಜತೆಗಿನ ಬಿಎಸ್ ಯಡಿಯೂರಪ್ಪ ಸಂಧಾನ ವಿಫಲವಾದ ಬಳಿಕ, ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದರು, ಬಳಿಕ ಚಿತ್ರರಂಗ, ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸುವುದಾಗಿ ಮಹದಾಯಿ ಹೋರಾಟಗಾರರು ತಿಳಿಸಿದ್ದರು.