ಕೈ, ಕಮಲ ಆಪರೇಷನ್ಗೆ ನಲುಗಿದ ಜೆಡಿಎಸ್
Team Udayavani, Jan 19, 2018, 6:05 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಬಲವರ್ಧನೆಗೆ ಮುಂದಾದ ಜೆಡಿಎಸ್ಗೆ ಮತ್ತೆ ಪೆಟ್ಟು ಬೀಳತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡೆಸಿದ “ಆಪರೇಷನ್’ಗೆ ಜೆಡಿಎಸ್ ನಲುಗುವಂತಾಗಿದೆ. ಪ್ರಸ್ತುತ ಉತ್ತರದಲ್ಲಿರುವ ಆರು ಜೆಡಿಎಸ್ ಶಾಸಕರಲ್ಲಿ ಇಬ್ಬರು ಬಿಜೆಪಿ ಸೇರಿದ್ದರೆ, ಇನ್ನಿಬ್ಬರು ಕಾಂಗ್ರೆಸ್ ಕದ ತಟ್ಟಿಯಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಈ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕೆಂಬ ಜೆಡಿಎಸ್ ವರಿಷ್ಠರಿಗೆ ಪಕ್ಷದಿಂದ ಆಯ್ಕೆಯಾದ ಶಾಸಕರೇ ಶಾಕ್ ನೀಡತೊಡಗಿದ್ದಾರೆ. 80ರ ದಶಕದಲ್ಲಿ ಕರ್ನಾಟಕದಲ್ಲೇ ರಾಜಕೀಯ ಬದಲಾವಣೆಯ ಮಹತ್ವದ ಕ್ರಾಂತಿ ಮೊಳಗಿತ್ತು. ಬಲಾಡ್ಯ ಕಾಂಗ್ರೆಸ್ ಮಣಿಸಿ ಜನತಾಪಕ್ಷ ಅಧಿಕಾರ ಹಿಡಿದು ಕಾಂಗ್ರೆಸ್ಗೆ ಪರ್ಯಾಯ ಶಕ್ತಿಯಾಗಿ ಜನತಾ ಪರಿವಾರ ಎದ್ದು ನಿಂತಿತ್ತು.
1983ರ ಚುನಾವಣೆಯಲ್ಲಿ ಜನತಾಪಕ್ಷ 95 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಇದರಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಪಾಲು 28 ಸ್ಥಾನಗಳಾಗಿದ್ದವು. 1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದು ಜನತಾ ಪಕ್ಷ 139 ಸ್ಥಾನ ಗಳಿಸಿತ್ತು. ಇದರಲ್ಲಿ ಉಕ ದ ಪಾಲು 60 ಸ್ಥಾನ. 1994ರಲ್ಲಿ ಜನತಾದಳ ಮತ್ತೂಮ್ಮೆ ಅಧಿಕಾರ ಹಿಡಿದಾಗ 115 ಸ್ಥಾನ ಪಡೆದಿತ್ತು. ಅದರಲ್ಲಿ ಉಕ 45 ಸ್ಥಾನಗಳ ಕೊಡುಗೆ ನೀಡಿತ್ತು.
1999ರ ಚುನಾವಣೆಯಲ್ಲಿ ಜನತಾ ಪರಿವಾರ ಸಂಯುಕ್ತ ಜನತಾದಳ, ಜಾತ್ಯತೀತ ಜನತಾದಳವಾಗಿ ವಿಂಗಡಣೆಗೊಂಡಿತ್ತು. ಜೆಡಿಯು 18 ಹಾಗೂ ಜೆಡಿಎಸ್ 10 ಸ್ಥಾನಗಳಲ್ಲಿ ಗೆದ್ದಿತ್ತು. ಜೆಡಿಎಸ್ನ 10 ಸ್ಥಾನಗಳಲ್ಲಿ 5 ಸ್ಥಾನ ಉಕದ್ದಾಗಿತ್ತು. 2004ರ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗಳಿಸಿತ್ತು. ಇದರಲ್ಲಿ ಉಕ ದ ಪಾಲು 17 ಆಗಿತ್ತು. 2008 ಮತ್ತು 2013ರ ಚುನಾವಣೆಯಲ್ಲೂ ಪಕ್ಷ ಸಂಘಟನೆಯ ಕೊರತೆಯ ನಡುವೆಯೂ ಈ ಭಾಗದ ಮತದಾರರು ಜೆಡಿಎಸ್ಗೆ ಕ್ರಮವಾಗಿ 10 ಹಾಗೂ 6 ಸ್ಥಾನಗಳನ್ನು ನೀಡಿದ್ದರು.
ಮತ್ತೆ ಮತ್ತೆ ಹೊಡೆತ: ಈ ಹಿಂದೆ, ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀಸಿದ ಬಲೆಗೆ ಜೆಡಿಯುನಿಂದ ಗೆದ್ದಿದ್ದ 18 ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್ ಕೈ ಹಿಡಿದಿದ್ದರು, ಇನ್ನು ಕೆಲವರು ಬಿಜೆಪಿ ಪಾಲಾಗಿದ್ದರು. ನಂತರದಲ್ಲಿ ಜೆಡಿಯು, ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿತ್ತು. ಜೆಡಿಎಸ್ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಬಲವಾಗಿದ್ದರೂ ಉತ್ತರದಲ್ಲಿ ಅದರ ಶಕ್ತಿ ಕುಂದಿತ್ತು.
2008ರ ಚುನಾವಣೆಯಲ್ಲಿ ಜೆಡಿಎಸ್ ಕೇವಲ 28 ಸ್ಥಾನ ಗೆದ್ದಿತ್ತು. ಅದರಲ್ಲಿ ಉಕದಿಂದ 10 ಮಂದಿ ಆಯ್ಕೆಯಾಗಿದ್ದರು. ಚುನಾವಣಾ ಫಲಿತಾಂಶ ಬಂದ ಕೇವಲ 36 ದಿನಗಳಲ್ಲಿ “ಆಪರೇಷನ್ ಕಮಲ’ಕ್ಕೆ ಬಿದ್ದ ಈ ಭಾಗದ ಮೂವರು ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
2013ರ ಚುನಾವಣೆಯಲ್ಲಿ ಜೆಡಿಎಸ್ 40 ಸ್ಥಾನಗಳನ್ನು ಗಳಿಸಿದ್ದು, ಉಕದಲ್ಲಿ 6 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. 2018ರ ವಿಧಾನಸಭೆ ಚುನಾವಣೆಗೆ ಉತ್ತರದಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿ ಪಕ್ಷ ಸಂಘಟನೆಗೆ ಹಲವು ಕಸರತ್ತು ಮಾಡುತ್ತಿರುವಾಗಲೇ, ಆರು ಜೆಡಿಎಸ್ ಶಾಸಕರಲ್ಲಿ ನಾಲ್ವರು ಪಕ್ಷದಿಂದ ದೂರವಾಗಿದ್ದಾರೆ.
ಜೆಡಿಎಸ್ ಭಿನ್ನಮತಿಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಈಗಾಗಲೇ ಕಾಂಗ್ರೆಸ್ ಕದ ತಟ್ಟಿಯಾಗಿದೆ. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ ಕಮಲ ಅಪ್ಪಿಕೊಂಡಾಗಿದೆ. ಉತ್ತರದಲ್ಲಿ ಇದೀಗ ಜೆಡಿಎಸ್ ಶಾಸಕರೆಂದು ಹೇಳಿಕೊಳ್ಳುವುದಕ್ಕೆ ಉಳಿದಿರುವವರು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಂಬೈ ಕರ್ನಾಟಕದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತ್ರ!
ಜೆಡಿಎಸ್ಗೆ ಈಗ ಪಕ್ಷ ಸಂಘಟನೆಯ ಕೊರತೆ ಒಂದು ಕಡೆಯಾದರೆ, ಪಕ್ಷದಿಂದ ಗೆದ್ದ ಅನೇಕರು ಅನ್ಯ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಈ ಎಲ್ಲ ಇಲ್ಲಗಳ ನಡುವೆ, ಸೊರಗಿದ ಸಂಘಟನೆಯೊಂದಿಗೆ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಯಾವ ರೀತಿ ಮೇಲೆದ್ದು ನಿಲ್ಲುವುದೋ ಕಾದು ನೋಡಬೇಕು.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ