ಪ್ರಚಾರಕ್ಕೆ ಬರ್ತಾರೆ ಪವನ್ ಕಲ್ಯಾಣ್
Team Udayavani, Jan 30, 2018, 8:35 AM IST
ಚಿಕ್ಕಬಳ್ಳಾಪುರ: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರಾಜ್ಯಕ್ಕೆ ಭೇಟಿ ನೀಡಿ ಜನಪರವಾಗಿರುವ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುತ್ತೇನೆಂದು ಆಂಧ್ರಪ್ರದೇಶದ ಜನಸೇನಾ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ತೆಲುಗಿನ ಖ್ಯಾತ ನಟ ಪವನ್
ಕಲ್ಯಾಣ್ ಘೋಷಿಸಿದರು.
ಜಿಲ್ಲೆಯ ಗಡಿ ಭಾಗ ಆಂಧ್ರದ ಹಿಂದೂಪುರದಲ್ಲಿ ಸೋಮವಾರ ಜನಸೇನಾ ಪಾರ್ಟಿ ವತಿಯಿಂದ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಜನ ಸೇವೆ ಮಾಡುವವರು ರಾಜಕಾರಣಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಜನಸೇನಾ ಪಕ್ಷ ಮುಂದಿನ ರಾಜ್ಯ
ವಿಧಾನಸಭಾ ಚುನಾವಣೆಯಲ್ಲಿ ಪಕ್ಷತೀತವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ. ಅದೇ ರೀತಿ ಅವರ ಪರವಾಗಿ ರಾಜ್ಯಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಲಾಗುವುದು. ನಮ್ಮ ಕುಟುಂಬದ ಮೇಲೆ
ವಿಶೇಷವಾಗಿ ನನ್ನ ಮೇಲೆ ಚಿಕ್ಕಬಳ್ಳಾಪುರ ಜನತೆಗೆ ಸಾಕಷ್ಟು ಅಭಿಮಾನ ಹೊಂದಿರುವುದಕ್ಕೆ ನಿಮಗೆ ನಾನೂ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.
ಪವನ್ ಕಲ್ಯಾಣ್ರನ್ನು ಅವರ ಅಭಿಮಾನಿಗಳು ಕೆವಿ ಕ್ಯಾಂಪಸ್ ಪ್ರವೇಶ ದ್ವಾರದಿಂದ ಕೆವಿ ಆಂಗ್ಲ ಶಾಲೆಯವರೆಗೂ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಕರೆ ತಂದರು. ಈ ವೇಳೆ ಪವನ್ ಕಲ್ಯಾಣ್ ಮೇಲೆ ಅಭಿಮಾನಿಗಳು ಹೂವಿನ ಸುರಿಮಳೆಗೈದು
ಜೈಕಾರ ಕೂಗಿದರು.