ಮಕ್ಕಳಿಗೆ ವಿಜ್ಞಾನ,ಗಣಿತ ಕಬ್ಬಿಣದ ಕಡಲೆ
Team Udayavani, Feb 1, 2018, 6:40 AM IST
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸರ್ಕಾರ ಪ್ರತಿಪಾದನೆ ಮಾಡುತ್ತಿದ್ದರೂ ಸರ್ಕಾರಿ ಶಾಲೆಗಳ ಎಂಟು ಲಕ್ಷ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದುಳಿದಿದ್ದಾರೆ.
ಹೌದು, ಶಿಕ್ಷಣ ಇಲಾಖೆ ನಡೆಸಿದ ವಿದ್ಯಾರ್ಥಿಗಳ ಸಮಗ್ರ ಮೌಲ್ಯಾಂಕನ ಸಮೀಕ್ಷೆಯಿಂದ ಇದು ಬಹಿರಂಗವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆಯಾಗಿದ್ದು ಎರಡೂ ವಿಷಯಗಳು ಕಠಿಣವಾಗಿವೆ ಎಂಬುದು ಸಮೀಕ್ಷೆಯಿಂದ ಬೆಳಕಿಗೆ ಬಂದಿವೆ.
ಐವತ್ತು ಸಾವಿರ ಶಾಲೆಗಳ 4 ರಿಂದ 9 ನೇ ತರಗತಿವರೆಗಿನ 36 ಲಕ್ಷ ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ನೀಡಿ ನಡೆಸಿದ ಸಮೀಕ್ಷೆಯಿಂದ ಈ ಮಾಹಿತಿ ಗೊತ್ತಾಗಿದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಲಭ್ಯವಿರುವ ಅನುದಾನ ಬಳಕೆ ಮಾಡುವ ಸಂಬಂಧ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಮೀಕ್ಷೆ ವಿಚಾರವೂ ಪ್ರಸ್ತಾಪವಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಸಚಿವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.