ಕೇರಳ ಮಾದರಿ ಪರಿಹಾರ ಪ್ಯಾಕೇಜ್ ಬೇಡ
Team Udayavani, Feb 8, 2018, 6:40 AM IST
ವಿಧಾನಸಭೆ: ತೀವ್ರ ಬರಗಾಲ ಮತ್ತು ಅಂತರ್ಜಲ ಕುಸಿತದಿಂದ ನಾಶವಾಗಿರುವ ಪ್ರತಿ ತೆಂಗಿನ ಮರಕ್ಕೆ 8000 ರೂ. ಪರಿಹಾರ ಪ್ಯಾಕೇಜ್ ಘೋಷಿಸುವುದು ಕಾರ್ಯಸಾಧುವಲ್ಲ. ಆದರೆ, ಸಾಧ್ಯವಾದಷ್ಟು ಪರಿಹಾರ ಒದಗಿಸುವ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಬರಗಾಲ ಮತ್ತು ಅಂತರ್ಜಲ ಕುಸಿತದಿಂದ 44 ಲಕ್ಷ ತೆಂಗಿನ ಮರಗಳು ನಾಶವಾಗಿ 4,500 ಕೋಟಿ ರೂ.ನಷ್ಟವಾಗಿರುವ ಬಗ್ಗೆ ಜೆಡಿಎಸ್ನ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಮತ್ತಿತರರು ಮಾಡಿದ ಪ್ರಸ್ತಾಪಕ್ಕೆ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪರವಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ಉತ್ತರ ನೀಡಿದ್ದಾರೆ.
ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಶವಾದ ಪ್ರತಿ ತೆಂಗಿನ ಮರಕ್ಕೆ 8 ಸಾವಿರ ರೂ.ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂಬ ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ತೆಂಗು ಬೆಳೆ ಹಾನಿಗೆ ಪರಿಹಾರ ಪ್ಯಾಕೇಜ್ ಕೋರಿ ಮುಖ್ಯಮಂತ್ರಿಗಳು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೆ, ಸತತ ಬರಗಾಲಕ್ಕೆ ತುತ್ತಾಗಿ 9,909 ಕೋಟಿ ರೂ.ಮೌಲ್ಯದ ತೆಂಗು ಮತ್ತು ಅಡಕೆ ಬೆಳೆ ನಾಶವಾಗಿದ್ದು, ಇದಕ್ಕೆ ನೆರವು ಕೋರಿ ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಿಯೋಗ ಕರೆದೊಯ್ಯಲು ಪ್ರಧಾನಿಯವರ ಸಮಯ ಕೋರಲಾಗಿದೆ ಎಂದು ಹೇಳಿದರು.