ರೈತ ಹೋರಾಟಗಾರ, ಶಾಸಕ ಪುಟ್ಟಣ್ಣಯ್ಯ ಇನ್ನಿಲ್ಲ
Team Udayavani, Feb 19, 2018, 6:00 AM IST
ಮಂಡ್ಯ: ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ (69) ಹೃದಯಾಘಾತದಿಂದ ಭಾನುವಾರ ರಾತ್ರಿ ವಿಧಿವಶರಾದರು.
ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕರಾಗಿದ್ದ ಪುಟ್ಟಣ್ಣಯ್ಯ ಅವರು ರೈತ ಸಂಘದ ಬೆಂಬಲಿತ ಸರ್ವೋದಯ ಪಕ್ಷದಿಂದ ಆಯ್ಕೆಯಾಗಿ ದ್ದರು. ಪುಟ್ಟಣ್ಣಯ್ಯ ಅವರು ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. 1983ರಲ್ಲಿ ರೈತ ಸಂಘಕ್ಕೆ ಪದಾರ್ಪಣೆ ಮಾಡಿದ್ದರು.
ರೈತರ ಧ್ವನಿಯಾಗಿದ್ದ ಪುಟ್ಟಣ್ಣಯ್ಯ
ಮಂಡ್ಯ: ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡ ಮಹಿಳೆಯರು ಅನುಭವಿಸುತ್ತಿದ್ದ ಕಷ್ಟಗಳಿಗೆ ರೈತ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಧ್ವನಿಯಾಗಿದ್ದರು.
ಪುಟ್ಟಣ್ಣಯ್ಯ ಅವರು ಪಾಂಡವಪುರ ತಾಲೂಕು ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಶ್ರೀ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶಾರದಮ್ಮ ದಂಪತಿ ಜೇಷ್ಠಪುತ್ರರಾಗಿ 1949ರ ಡಿ.23ರಂದು ಜನಿಸಿದರು.
ವಿದ್ಯಾಭ್ಯಾಸ
ತಮ್ಮ ಹುಟ್ಟೂರಿನಲ್ಲಿಯೇ ಎಸ್ಎಸ್ಎಲ್ಸಿಯನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಮೈಸೂರಿನಲ್ಲಿರುವ ಪ್ರತಿಷ್ಠಿತ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಾಡಿ ನಂತರ ಇದೇ ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ.
ರಾಜಕೀಯ ಪ್ರವೇಶ
ಎಸ್.ಡಿ. ಜಯರಾಂ ಅವರ ಮಾರ್ಗದರ್ಶನದಲ್ಲಿ 1983ರಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪದಾರ್ಪಣೆ ಮಾಡಿದರು. ಪಾಂಡವಪುರ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿÇÉಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಜನಪರ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದರು. ಬಳಿಕ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ 1999 ರಿಂದ 2012ರ ವರೆಗೆ ಸಮರ್ಥವಾಗಿ ಜವಾಬ್ದಾರಿಯನ್ನು ನಿಭಾಯಿಸಿದರು.
ಅವರ ರೈತಪರ ಹೋರಾಟದಿಂದ 1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ಈ ಅವಧಿಯಲ್ಲಿ ಜನರ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಹೆಗ್ಗಳಿಗೆ ಗಳಿಸಿದ್ದರು.
ಹೋರಾಟಗಳು:
ಯಾವುದೇ ಹಳ್ಳಿಗಳಿಗೆ ಕಂದಾಯ ಅಧಿಕಾರಿಗಳು ಮುನ್ಸೂಚನೆ ಇಲ್ಲದೇ ಏಕಾಏಕಿ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆ ನಿರ್ಬಂಧಕ್ಕೆ ಹೋರಾಡಿದರು. ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಂತೆ ಕರ್ನಾಟಕದಾದ್ಯಂತ “ಸರಳ ವಿವಾಹ’ ಆಯೋಜಿಸಿದರು. ಕಬ್ಬು, ರೇಷ್ಮೆ, ಭತ್ತ ಹಾಗೂ ಇನ್ನಿತ ಕೃಷಿ ಉತ್ಪನ್ನಗಳಿಗೆ ಸರ್ಕಾರದಿಂದ ಬೆಂಬಲ ಬೆಲೆ ನೀಡುವಂತೆ ಹೋರಾಡಿದರು.
ರೈತರುಗಳು ಬೆಳೆದ ಹಸಿರು ತರಕಾರಿಗಳು, ಹೂ, ಹಣ್ಣುಗಳನ್ನು ಮಾರಾಟ ಮಾಡಲು ಯಾವುದೇ ಮಧ್ಯವರ್ತಿಗಳ ಹಾವಳಿಲ್ಲದೆ ರೈತರರೇ ನೇರವಾಗಿ ಮಾರುಕಟ್ಟೆಗಳಲ್ಲಿ ಮಾರಾಟಮಾಡಲು ಅವಕಾಶಕ್ಕಾಗಿ ಹೋರಾಡಿದರು. ಪುಟ್ಟಣ್ಣಯ್ಯ ಅವರು “ಮಂಡ್ಯ ಸ್ಟಾರ್’ ಚಲನಚಿತ್ರದಲ್ಲೂ ರೈತ ನಾಯಕನಾಗಿ ಅಭಿನಯಿಸಿದ್ದರು.