ದತ್ತಪೀಠ ವಿಚಾರದಲ್ಲಿ ಹಿಂದೂಗಳಿಗೆ ವಂಚನೆ
Team Udayavani, Mar 5, 2018, 6:00 AM IST
ಬೆಂಗಳೂರು: ದತ್ತಪೀಠವನ್ನು ಮುಜರಾಯಿ ಇಲಾಖೆಗೆ ಸೇರಿ ಸುವ ರಾಜ್ಯ ಸಚಿವ ಸಂಪುಟ ತೀರ್ಮಾನವನ್ನು ಖಂಡಿಸಿರುವ ಬಿಜೆಪಿ, ಕಾನೂನು ಹೋರಾಟಕ್ಕೂ ಮುಂದಾಗಿದೆ.
ಈ ಸಂಬಂಧ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಇಲಾಖೆಗೆ ಸೇರಿಸುವ ತೀರ್ಮಾ ನದಿಂದಾಗಿ ರಾಜ್ಯ ಸರ್ಕಾರ ಅಲ್ಲಿ ಮುಜಾವರ್ಗಳನ್ನೇ ಪೂಜೆಗೆ ನೇಮಿಸಿ, ಹಿಂದೂಗಳನ್ನು ವಂಚಿಸಲು ಮುಂದಾಗಿದೆ. ಹೀಗಾಗಿ ಕಾನೂನು ಹೋರಾ ಟದ ಜತೆಗೆ ದತ್ತ ಪೀಠ ಮುಕ್ತಿಯ ಪರ ಸಂಕಲ್ಪ ಹೋರಾ ಟಕ್ಕೂ ಮುಂದಾಗಿದ್ದೇವೆ ಎಂದು ಹೇಳಿ ದ್ದಾರೆ.
ಮೊದಲಿನಿಂದಲೂ ದತ್ತಪೀಠ ಮುಜರಾಯಿ ಇಲಾಖೆ ವಶದಲ್ಲಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಸ್ಪಷ್ಟಪಡಿಸಿದೆ. ವಿವಾದ ಇದ್ದದ್ದು ದತ್ತಪೀಠಕ್ಕೆ ಅರ್ಚಕರ ನೇಮಕ ಮತ್ತು ಅಲ್ಲಿ ಹಿಂದೂ ಪದ್ಧತಿ ಪ್ರಕಾರ ಪೂಜೆ ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದಂತೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ಎರಡು ವಿಚಾರಗಳನ್ನು ಸರ್ಕಾರ ಸ್ಪಷ್ಟಪಡಿಸಬೇಕಿತ್ತು. ಅದರ ಬದಲು ದತ್ತಪೀಠವನ್ನು ಮುಜರಾಯಿ ಇಲಾಖೆಗೆ ಸೇರಿಸಲಾಗುವುದು ಎಂದು ಜನರನ್ನು ಸಮಾಧಾನಪಡಿಸಲು ಮುಂದಾಗಿರುವ ಸರ್ಕಾರ ನಿಜವಾಗಿಯೂ ಹಿಂದೂಗಳಿಗೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿ ಸಿದ್ದಾರೆ.
ಮೈಸೂರು ಮುಜರಾಯಿ ಮ್ಯಾನುವಲ್ ಕಾಯ್ದೆ ಜಾರಿಯಾದ 1927ರಿಂದಲೇ ದತ್ತಪೀಠ ಮುಜರಾಯಿ ಇಲಾಖೆಯ ವಶದಲ್ಲಿದೆ. 1991ರಲ್ಲೇ ದತ್ತಪೀಠ ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಿರುವಾಗ ದತ್ತಪೀಠವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಸಂಪುಟ ನಿರ್ಧರಿಸಿದೆ ಎನ್ನಲು ಇವರಾರು ಎಂದು ಪ್ರಶ್ನಿಸಿದರು.
ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರ ಇದ್ದುದು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಮತ್ತು ಹಿಂದೂ ಪದ್ಧತಿ ಪ್ರಕಾರ ಪೂಜೆ ಮಾಡುವುದಕ್ಕೆ ಸಂಬಂಧಿಸಿದಂತೆ. ಈ ಕುರಿತು 2010ರಲ್ಲಿ ಸುಪ್ರೀಂ ಕೋರ್ಟ್ಗೆ ಮುಜರಾಯಿ ಆಯುಕ್ತರು ಸಲ್ಲಿಸಿದ್ದ ವರದಿಯಲ್ಲಿ ದತ್ತಪೀಠದಲ್ಲಿ ದತ್ತಾತ್ರೇಯ ದೇವರು ಇದ್ದಾರೆ. ಇದು ಮುಜರಾಯಿ ದೇವಸ್ಥಾನವಾಗಿದ್ದು, ತಸ್ತೀಕ್ ಹಣ ಹೋಗುತ್ತಿದೆ. ಹೀಗಾಗಿ ಜನರ ಬೇಡಿಕೆ ಪ್ರಕಾರ ಅಲ್ಲಿ ಹಿಂದೂ ಅರ್ಚಕರನ್ನು ನೇಮಿಸುವುದು ಸೂಕ್ತ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸರ್ಕಾರ, ಇದು ಸೂಕ್ಷ್ಮ ವಿಚಾರವಾಗಿದ್ದರಿಂದ ಎರಡೂ ಕೋಮಿನವರನ್ನು ಸೇರಿಸಿ ವಿವಾದ ಬಗೆಹರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಅವಕಾಶ ಕೇಳಿದಾಗ ಮುಜರಾಯಿ ಆಯುಕ್ತರ ವರದಿ ಆಧರಿಸಿ ಪ್ರಕರಣ ಇತ್ಯರ್ಥಪಡಿಸಿ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು ಎಂದು ವಿವರಿಸಿದರು.
ಆದರೆ, ವಿವಾದವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಬಗೆಹರಿಸಲು ಇಷ್ಟವಿಲ್ಲದ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ್ದಾಸ್ ನೇತೃತ್ವದ ಸಮಿತಿ ರಚಿಸಿ ತನಗೆ ಬೇಕಾದಂತೆ ವರದಿ ಪಡೆದುಕೊಂಡಿದೆ. ಆ ವರದಿಯಂತೆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ಮುಜಾವರ್ ದೀಪ ಹಚ್ಚಬೇಕು ಮತ್ತು ಪೂಜೆ ಸಲ್ಲಿಸಬೇಕು. ಶಾಖಾದ್ರಿ ನೇತೃತ್ವದಲ್ಲಿ ಇದು ಮುಂದುವರಿಯಬೇಕು ಎಂದು ಸರ್ಕಾರ ಶನಿವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಆ ಮೂಲಕ ದತ್ತಪೀಠದಲ್ಲಿ ಅರ್ಚಕರ ನೇಮಕ ಮತ್ತು ಹಿಂದೂ ಪದ್ಧತಿ ಪ್ರಕಾರ ಪೂಜೆ ನಡೆಯಬೇಕು ಎಂದು ಎರಡು ತಲೆಮಾರುಗಳಿಂದ ಹೋರಾಟ ನಡೆಸುತ್ತಿರುವವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ದತ್ತಪೀಠವನ್ನು ದತ್ತಾತ್ರೆಯ ಸ್ವಾಮಿ ಬಾಬಾ ಬುಡನ್ ದರ್ಗಾ ಎಂದು ಕರೆಯಲು ಕಾಂಗ್ರೆಸ್ನವರಿಗೆ ಅಧಿಕಾರ ಕೊಟ್ಟವರು ಯಾರು? ಮುಖ್ಯಮಂತ್ರಿಗಳು ಬೇಕಿದ್ದರೆ ತಮ್ಮ ಹೆಸರನ್ನು ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದಿಟ್ಟುಕೊಳ್ಳಲಿ. ದತ್ತಪೀಠದ ಹೆಸರು ಬದಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಒಂದು ವೇಳೆ ಇಂತಹ ಕ್ರಮಕ್ಕೆ ಮುಂದಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆ ಬರಬಹುದು ಇಲ್ಲವೇ ಕ್ರಾಂತಿಯಾಗಲಿದೆ. ಅಂತಹ ಅನಾಹುತವಾದರೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೂಗಳ ಪೂಜನೀಯ ಸ್ಥಾನದಲ್ಲಿ ಮುಜಾವರ್ ಪೂಜೆ ಮಾಡುತ್ತಾರೆ ಎಂದರೆ ಅದನ್ನು ಒಪ್ಪಲು ಸಾಧ್ಯವೇ? ಹಾಗಿದ್ದರೆ ಮಸೀದಿಗಳಲ್ಲಿ ಹಿಂದೂ ಅರ್ಚಕರು ಪೂಜೆ ಮಾಡಲು ಸರ್ಕಾರ ಅವಕಾಶ ನೀಡುತ್ತದೆಯೇ? ಸರ್ಕಾರ ಮಸೀದಿಗಳಲ್ಲಿ ಅರ್ಚಕರನ್ನು ನೇಮಿಸಿ ಪೂಜೆ ಮಾಡಿಸುವುದಾದರೆ ದತ್ತಪೀಠದಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಮುಜಾವರ್ ಮೂಲಕ ಪೂಜೆಗೆ ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ.
– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ದತ್ತಪೀಠದಲ್ಲಿ ದೀಪ ಹಚ್ಚಲು, ಪೂಜೆ ಮಾಡಲು ಮುಜಾವರ್ಗೆ ಹಿಂದೂಗಳ ಪೂಜಾ ಪದ್ಧತಿ ಗೊತ್ತಿದೆಯೇ? ಅವರು ಮಂತ್ರ ಹೇಳುತ್ತಾರಾ? ಮೂರ್ತಿಪೂಜೆ ಖಂಡಿಸುವ ಅವರು ದತ್ತಪಾದುಕೆ ಪೂಜೆ ಮಾಡುತ್ತಾರಾ? ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಗೋಮುಖವ್ಯಾಘ್ರತನವಲ್ಲವೇ? ಹೊರಗೆ ನಾವು ಹಿಂದೂ ಪರ ಎಂದು ಹೇಳಿಕೊಂಡು ಒಳಗೆ ವಿಷ ತುಂಬಿದ ಹಿಂದೂ ವಿರೋಧಿ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
– ಶೋಭಾ ಕರಂದ್ಲಾಜೆ, ಸಂಸದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ