ಚಿಕಿತ್ಸೆ ಮುಗಿಸಿ ಮಂಜುನಾಥನ ದರ್ಶನ ಪಡೆದ ಸಿದ್ದು
Team Udayavani, Jun 29, 2018, 9:56 AM IST
ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನದಲ್ಲಿ ಸುಮಾರು 12 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಮಂಗಳೂರು ಮೂಲಕ ಬೆಂಗಳೂರಿಗೆ ತೆರಳಿದರು. ಗುರುವಾರ ಬೆಳಗ್ಗಿನಿಂದಲೇ ವಿವಿಧ ಅಭಿಮಾನಿಗಳು, ಪಕ್ಷದ ಪ್ರಮುಖರು ಸಿದ್ದರಾಮಯ್ಯ ಅವರನ್ನು ಕಾಣಲು ಶಾಂತಿವನಕ್ಕೆ ಆಗಮಿಸಿದ್ದರು. ಅವರ ಜತೆ ಮಾತುಕತೆ ನಡೆಸಿ ಪೋಟೊ ತೆಗೆಸಿಕೊಂಡರು. ಜತೆಗೆ ಶಾಂತಿವನದ ಸಿಬಂದಿಯ ಜತೆಯೂ ಬೆರೆತು ಕೃತಜ್ಞತೆ ಸಲ್ಲಿಸಿದರು. ಬೆಳಗ್ಗೆ 11.45ಕ್ಕೆ ಶಾಂತಿವನದಿಂದ ಹೊರಟು ನೇರವಾಗಿ ಧರ್ಮಸ್ಥಳದ ಸನ್ನಿಧಿ ವಸತಿಗೃಹಕ್ಕೆ ತೆರಳಿದರು. ಅಲ್ಲಿಂದ ದೇವಸ್ಥಾನಕ್ಕೆ ತೆರಳಿ ಶ್ರೀ ಮಂಜುನಾಥನ ದರುಶನ ಪಡೆದು, ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಸುಮಾರು ಅರ್ಧಗಂಟೆಗಳ ಕಾಲ ದೇವಸ್ಥಾನದಲ್ಲಿ ಕಳೆದ ಮಾಜಿ ಮುಖ್ಯಮಂತ್ರಿಗಳು ಮತ್ತೆ ಸನ್ನಿಧಿಗೆ ತೆರಳಿದರು. ಅಲ್ಲಿ ಭೋಜನ ಸ್ವೀಕರಿಸಿ ಸುಮಾರು ಒಂದು ಕಾಲು ಗಂಟೆಗಳ ವಿಶ್ರಾಂತಿ ಪಡೆದು ಖಾಸಗಿ ವಾಹನದಲ್ಲಿ ಮಂಗಳೂರಿನತ್ತ ತೆರಳಿದರು.
ಆರೋಗ್ಯ ಕೆಟ್ಟು ಬಂದದ್ದಲ್ಲ
ಸನ್ನಧಿಯಲ್ಲಿ ಮಂಗಳೂರಿಗೆ ತೆರಳಲು ಕಾರಿನತ್ತ ಆಗಮಿಸುವ ಸಂದರ್ಭದಲ್ಲಿ ಮಾಧ್ಯಮದವರು ಮಾಜಿ ಸಿಎಂರನ್ನು ಮಾತನಾಡಿಸಲು ಮುಂದಾದಾಗ ಮಾತನಾಡಲು ನಿರಾಕರಿಸಿದರು. ಬಳಿಕ ಆರೋಗ್ಯ ಹೇಗಿದೆ ಎಂದು ಕೇಳಿದಾಗ ನಾನು ಆರೋಗ್ಯ ಕೆಟ್ಟು ಇಲ್ಲಿಗೆ ಬಂದಿಲ್ಲ ಎಂದಷ್ಟೇ ಉತ್ತರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಸಿದ್ದರಾಮಯ್ಯರ ಜತೆಗಿದ್ದರು. ಕ್ಷೇತ್ರದ ಪರವಾಗಿ ಸಿದ್ದರಾಮಯ್ಯ ಅವರನ್ನು ಮಾಲೆ ಹಾಕಿ ಗೌರವಿಸಲಾಯಿತು. ಧರ್ಮಾಧಿಕಾರಿಗಳ ಕಾರ್ಯದರ್ಶಿ ಎ. ವೀರು ಶೆಟ್ಟಿ, ವ್ಯವಸ್ಥಾಪಕ ಪಾಶ್ವನಾಥ್, ಶಾಂತಿವನದ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಲಕ್ಷ್ಮೀನಾರಾಯಣ ರಾವ್ ಭಾಗವಹಿಸಿದ್ದರು. ತಾನು ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ನಿಗಮ ಮಂಡಳಿಯಲ್ಲಿ ತನಗೆ ಅವಕಾಶ ನೀಡಬೇಕು ಎಂದು ಕೇಳಲು ಬಂದಿದ್ದೇನೆ ಎಂದು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಮಲಮ್ಮ ಪ್ರತಿಕ್ರಿಯಿಸಿದ್ದಾರೆ.
ಪ್ರಕೃತಿ ಚಿಕಿತ್ಸೆಯ ಶಿಸ್ತಿನ ಸಾಧಕ
ಸಿದ್ದರಾಮಯ್ಯ ಅವರಿಗೆ ಚುನಾವಣೆ ಸಮಯದಲ್ಲಿ ಆಹಾರ ವ್ಯತ್ಯಯ ಆಗಿ ಆರೋಗ್ಯ ಏರುಪೇರಾಗಿತ್ತು. ಸ್ವಲ್ಪ ತೂಕವೂ ಜಾಸ್ತಿಯಾಗಿದ್ದು, ಪ್ರಸ್ತುತ 3 ಕೆ.ಜಿ.ಯಷ್ಟು ಕಡಿಮೆಯಾಗಿದ್ದಾರೆ. ಅವರೊಬ್ಬ ಪ್ರಕೃತಿ ಚಿಕಿತ್ಸೆಯ ಶಿಸ್ತಿನ ಸಾಧಕರಾಗಿದ್ದಾರೆ. ಈ ಹಿಂದೆಯೂ ಇಲ್ಲಿ ಎರಡು ಬಾರಿ ಚಿಕಿತ್ಸೆ ಪಡೆದಿದ್ದು, ವಿಐಪಿ ಎಂಬ ಅಹಂ ಇಲ್ಲದೆ ಸ್ಪಂದಿಸಿದ್ದಾರೆ ಎಂದು ಮುಖ್ಯವೈದ್ಯಾಧಿಕಾರಿ ಡಾ| ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
ಮತ್ತೆ ಹಳೆಯ ಗೆಟಪ್!
ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಟೀಶರ್ಟ್, ಪ್ಯಾಂಟ್, ನ್ಪೋರ್ಟ್ಸ್ ಶೂ ಧರಿಸಿ ಕಾಣಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಶಾಂತಿವನದಿಂದ ಹೊರಡಲು ಅಣಿಯಾಗುತ್ತಿದ್ದಂತೆ ತನ್ನ ಹಿಂದಿನ ಪೈಜಾಮ, ರೇಷ್ಮೆ ಪಂಚೆ ಗೆಟಪ್ಗೆ ಮರಳಿ ಹಿಂದಿನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಗುಪ್ತಸಭೆ
ಸರ್ಕಿಟ್ ಹೌಸ್ ನಲ್ಲಿ ಉಪಸ್ಥಿತರಿದ್ದ ಪಕ್ಷದ ಮಾಜಿ ಶಾಸಕರು ಹಾಗೂ ಮುಖಂಡರ ಜತೆ ಕೊಠಡಿಯೊಳಗೆ ಗುಪ್ತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಗಿರುವ ಹಿನ್ನಡೆಯ ಬಗ್ಗೆ ಮಾಜಿ ಶಾಸಕರು ಹಾಗೂ ಮುಖಂಡರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆದ ಸಿದ್ದರಾಮಯ್ಯ
ಮಂಗಳೂರು: ಸಿದ್ದರಾಮಯ್ಯ ಅವರು ಧರ್ಮಸ್ಥಳ ಶಾಂತಿವನದ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಆಗಮಿಸಿ ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆದರು. ಬಳಿಕ ಸಂಜೆ 6.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ 7.20ರ ವಿಮಾನದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು.
ಧರ್ಮಸ್ಥಳದಿಂದ ಮಧ್ಯಾಹ್ನ 1.30ರ ವೇಳೆಗೆ ಹೊರಟು ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಪಂಜಿಮೊಗರು ಸಮೀಪದ ಶಾಂತಿನಗರದಲ್ಲಿರುವ ಕುರುಬ ಸಮುದಾಯದ ಕನಕ ಭವನಕ್ಕೆ ಆಗಮಿಸಿ ಅಲ್ಲಿ ಸುಮಾರು ಒಂದು ತಾಸು ಉಪಸ್ಥಿತರಿದ್ದರು. ಬಳಿಕ ಅಲ್ಲಿಂದ 4 ಗಂಟೆಯ ವೇಳೆಗೆ ಸರ್ಕಿಟ್ ಹೌಸ್ ಗೆ ಆಗಮಿಸಿದರು. ಅಲ್ಲಿ ನೆರೆದಿದ್ದ ಮಾಧ್ಯಮದ ಜತೆ ಮಾತನಾಡಲು ನಿರಾಕರಿಸಿದ ಅವರು ನೇರವಾಗಿ ತನಗೆ ಕಾದಿರಿಸಿದ್ದ ಕೊಠಡಿಗೆ ತೆರಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊದಿನ್ ಬಾವಾ, ಬೆಂಗಳೂರಿನ ಮಾಜಿ ಮೇಯರ್ ರಾಮಚಂದ್ರಪ್ಪ, ಮೇಯರ್ ಭಾಸ್ಕರ್ ಕೆ., ಮಾಜಿ ಮೇಯರ್ ಶಶಿಧರ ಹೆಗ್ಡೆ, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಾರ್ಪೊರೇಟರ್ ಪ್ರತಿಭಾ ಕುಳ್ಯಾ, ದ.ಕ. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು ಎರಡೂಮುಕ್ಕಾಲು ತಾಸು ಸರ್ಕೀಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆದ ಅವರು 6.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ 7.20ರ ವಿಮಾನನಿಲ್ದಾಣದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಬಿಬಿಎಂಪಿ ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಸಿದ್ದರಾಮಯ್ಯ ಜತೆಗಿದ್ದರು.
ನಿರಾಳರಾಗಿದ್ದ ಸಿದ್ದರಾಮಯ್ಯ
ಪ್ರಕೃತಿ ಚಿಕಿತ್ಸೆಯ ಬಳಿಕ ಉಲ್ಲಾಸಭರಿತರಾಗಿದ್ದ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ನಿರಾಳವಾಗಿರುವಂತೆ ಕಂಡುಬಂದರು. ಕುರುಬ ಸಮುದಾಯದ ಸಮಾರಂಭದಲ್ಲೂ ಎಲ್ಲರ ಜತೆ ನಗುನಗುತ್ತಾ ಮಾತನಾಡಿದ ಅವರು ಅಭಿಮಾನಿಗಳ ಜತೆ ಸೆಲ್ಫಿ ತೆಗೆದುಕೊಂಡರು. ಸರ್ಕಿಟ್ ಹೌಸ್ ನಲ್ಲೂ ಅವರನ್ನು ಭೇಟಿಯಾಗಲು ಬಂದಿದ್ದ ಸ್ಥಳೀಯ ಮುಖಂಡರು ಕಾರ್ಯಕರ್ತರ ಜತೆ ಹಾಯಾಗಿ ಮಾತನಾಡಿದರು. ಆದರೆ ಮಾಧ್ಯಮವರಿಗೆ ಸರ್ಕಿಟ್ ಹೌಸ್ ಗೆ ಆಗಮಿಸುವ ಸಂದರ್ಭದಲ್ಲಿ ವೀಡಿಯೋ, ಪೋಟೋ ತೆಗೆಯಲು ಮಾತ್ರ ಅವಕಾಶ ನೀಡಿದ ಬಳಿಕ ಕೊಠಡಿಗೆ ಪ್ರವೇಶ ಅವಕಾಶ ಕಲ್ಪಿಸಲಿಲ್ಲ.