ಪ್ರತ್ಯೇಕ ಧರ್ಮಕ್ಕೆ ಕೇಂದ್ರ ನಿರಾಕರಿಸಿದರೆ ಸುಪ್ರೀಂ ಮೊರೆ
Team Udayavani, Mar 22, 2018, 6:30 AM IST
ವಿಜಯಪುರ: ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ರವಾನಿಸಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ 2 ಸಿ ಅನ್ವಯ ಮಾನ್ಯತೆ ನೀಡಲೇಬೇಕು. ಹಿಂದೂಗಳಿಗಿಂತ ಲಿಂಗಾಯತರು ಹೇಗೆ ಭಿನ್ನ ಎಂಬುದಕ್ಕೆ ಐತಿಹಾಸಿಕ ದಾಖಲೆಗಳನ್ನು ನೀಡಿದ್ದೇವೆ. ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ಪ್ರತ್ಯೇಕ ಧರ್ಮದ ಮಾನ್ಯತೆಗೆ ನಿರಾಕರಿಸಿದರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಅಗತ್ಯ ದಾಖಲೆ ನೀಡಿದ್ದೇವೆ. ಆರೆಸ್ಸೆಸ್ ಹಾಗೂ ಇತರ ರಾಜಕೀಯ ಒತ್ತಡಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವುದು ನಮ್ಮ ಮುಂದಿರುವ ಅಂತಿಮ ಆಯ್ಕೆ. ಜೈನರು ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದುಕೊಂಡದ್ದು ಸುಪ್ರೀಂಕೋರ್ಟ್ನಿಂದಲೇ ಎಂದರು.
ಬ್ರಾಹ್ಮಣರು ತಾವು ಹಿಂದೂಗಳಿಗಿಂತ ಭಿನ್ನವೆಂದು ದಾಖಲೆ ಸಲ್ಲಿಸಿ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಲಿಂಗಾಯತರು ಪ್ರತ್ಯೇಕ ಧರ್ಮವಾದರೆ ಹಿಂದೂ ಧರ್ಮ ಒಡೆಯುತ್ತದೆ ಎಂದು ಹೇಳುವವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದರೆ ಧರ್ಮ ಒಡೆಯುವುದಿಲ್ಲವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.