ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಬದಲು 13 ವಿದ್ಯಾರ್ಥಿಗಳು ಕಂಗಾಲು
Team Udayavani, Mar 25, 2018, 6:40 AM IST
ಹಾವೇರಿ: ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಪ್ರಶ್ನೆಪತ್ರಿಕೆ ಅದಲು ಬದಲಾಗಿ 13 ವಿದ್ಯಾರ್ಥಿಗಳು ತೊಂದರೆಗೊಳಗಾದ ಘಟನೆ ರಾಣಿಬೆನ್ನೂರಿನ ತುಮ್ಮಿನಕಟ್ಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೊಠಡಿ ಸಿಬ್ಬಂದಿ ಡಿಬಾರ್ ಬೆದರಿಕೆ ಹಾಕಿದ್ದರಿಂದ ಘಟನೆ ಶುಕ್ರವಾರ ಬೆಳಕಿಗೆ ಬಂದಿಲ್ಲ.
ತುಮ್ಮಿನಕಟ್ಟಿಯ ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 12ರಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರು ವಿದ್ಯಾರ್ಥಿಗಳಿಗೆ ಸಿಸಿಇಆರ್ಎಫ್ (ಹೊಸ ಪಠ್ಯಕ್ರಮ) ಪ್ರಶ್ನೆಪತ್ರಿಕೆ ಬದಲು ಕೊಡದೇ ಸಿಸಿಇಆರ್ಆರ್ (ಹಳೆಯ ಪಠ್ಯಕ್ರಮ) ಪ್ರಶ್ನೆಪತ್ರಿಕೆಗಳನ್ನು ನೀಡಿದರು. ಇದನ್ನು ನೋಡುತ್ತಿದ್ದಂತೆಯೇ ವಿದ್ಯಾರ್ಥಿಗಳು ನಮಗೆ ಸಂಬಂಧಿಸಿಲ್ಲ ಎಂದು ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದಿಸದ ಮೆಲ್ವಿಚಾರಕರು ಸಮಸ್ಯೆ ಪರಿಹರಿಸದೆ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಿದ್ದಾರೆ.
ವಿದ್ಯಾಥಿಗಳಿಂದ ಉತ್ತರ ಪತ್ರಿಕೆಗಳನ್ನು ಮರಳಿ ಪಡೆವಾಗ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರಿಂದ ಮಧಾಹ್ನ 1ಕ್ಕೆ ಪುನಃ ವಿದ್ಯಾರ್ಥಿಗಳಿಗೆ ಸಿಸಿಇಆರ್ಎಫ್ ಪ್ರಶ್ನೆಪತ್ರಿಕೆ ನೀಡಿ 30 ನಿಮಿಷಗಳ ಕಾಲಾವಕಾಶ ನೀಡಿ ಕಾಟಾಚಾರಕ್ಕೆ ಪರೀಕ್ಷೆ ಮುಗಿಸಿದ್ದಾರೆ. ತಮ್ಮ ತಪ್ಪು ಮುಚ್ಚಿಡಲು ವಿದ್ಯಾರ್ಥಿಗಳಿಗೆ ಡಿಬಾರ್ ಮಾಡುವ ಬೆದರಿಕೆ ಹಾಕಿದ್ದಾರೆ. ವಿದ್ಯಾರ್ಥಿಗಳು ತಮಗಾದ ಅನ್ಯಾಯವನ್ನು ಸರಿಪಡಿಸಲು ಪತ್ರದ ಮೂಲಕ ಹಿರಿಯ ಅಧಿಕಾರಿಗೆ ಒತ್ತಾಯಿಸಿದ್ದಾರೆ.