ಕೃಷ್ಣ ಮನವೊಲಿಸಿದ ಬಿಜೆಪಿ ನಾಯಕರು
Team Udayavani, Apr 12, 2018, 7:00 AM IST
ಬೆಂಗಳೂರು:ಪಕ್ಷದಲ್ಲಿ ಕಡೆಗಣಿಸಿರುವುದರಿಂದ ಬೇಸರಗೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಚರ್ಚಿಸಿದ್ದಾರೆ.
ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಎಸ್.ಎಂ.ಕೃಷ್ಣ ಅವರನ್ನು ಸಂಪರ್ಕಿಸಿ ನಿಮ್ಮನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷದ ಜತೆ ಇರಿ ಎಂದು ಹೇಳಿದರು ಎನ್ನಲಾಗಿದೆ.
ಚುನಾವಣಾ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಪಕ್ಷ ಬಿಟ್ಟರೆ ಅಥವಾ ಪ್ರಚಾರಕ್ಕೆ ಬಾರದೆ ಮೌನಕ್ಕೆ ಶರಣಾದರೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ. ಅವರ ಜತೆ ಮಾತನಾಡಿ ಎಂದು ಕೇಂದ್ರದ ನಾಯಕರು ಸೂಚನೆ ನೀಡಿದ್ದರಿಂದ ರಾಜ್ಯ ನಾಯಕರು ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.
ಎಸ್.ಎಂ.ಕೃಷ್ಣ ಅವರು ಬಯಸಿದರೆ ಅವರ ಪುತ್ರಿ ಶಾಂಭವಿ ಅವರಿಗೆ ಮದ್ದೂರು ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ಹೇಳಲಾಗಿದೆ.