ಮತದಾನಕ್ಕೆ ಬಳ್ಳಾರಿಗೆ ತೆರಳಬೇಕೆಂಬ ಜನಾರ್ದನ ರೆಡ್ಡಿ ಆಸೆ ಭಗ್ನ!
Team Udayavani, May 4, 2018, 2:52 PM IST
ಹೊಸದಿಲ್ಲಿ: ಮೇ 12 ರಂದು ಮತ ಚಲಾಯಿಸಲು ಬಳ್ಳಾರಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಇದರಿಂದಾಗಿ ತವರಿಗೆ ಕಾಲಿಡುವ ಗಣಿಧಣಿಯ ಆಸೆಗೆ ತಣ್ಣೀರೆರಚಿದಂತಾಗಿದೆ.
10 ದಿನಗಳ ಕಾಲ ಬಳ್ಳಾರಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ರೆಡ್ಡಿ ಮನವಿ ಮಾಡಿದ್ದರು. ಮನವಿ ತಿರಸ್ಕರಿಸಿದ ಕೋರ್ಟ್, ಮತದಾನ ಮಾಡಲು ಬದಲಿ ವ್ಯವಸ್ಥೆಗಳಿವೆ ಆ ಮೂಲಕ ಮತದಾನ ಮಾಡಿ,ನೀವು ಭೇಟಿ ನೀಡಿದರೆ ರಾಜಕೀಯದ ಮೇಲೆ ಪರಿಣಾಮ ಬಿರುತ್ತದೆ ಎಂದು ಅವಕಾಶ ನಿರಾಕರಿಸಿದೆ.
ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ.
ಬಳ್ಳಾರಿ,ಆಂಧ್ರದ ಅನಂತಪುರಂ ಮತ್ತು ಕರ್ನೂಲಿಗೆ ಭೇಟಿ ನೀಡಬಾರದು ಎಂದು ಬಂಧನಕ್ಕೊಳಗಾಗಿದ್ದ ರೆಡ್ಡಿಗೆ 2015 ರಲ್ಲಿ ಷರತ್ತು ವಿಧಿಸಿ ಜಾಮೀನು ನೀಡಿತ್ತು, ಆದರೆ ಮಗಳು ಬ್ರಹ್ಮಿಣಿಯ ಮದುವೆಯ ವೇಳೆ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಿತ್ತು.