ರಾಜ್ಯಪಾಲರು ಬಿಜೆಪಿಗೆ ಅವಕಾಶ ಕೊಟ್ಟರೆ ಪ್ರತಿಭಟನೆ: ಸಿದ್ಧರಾಮಯ್ಯ
Team Udayavani, May 16, 2018, 7:12 PM IST
ಬೆಂಗಳೂರು : ”ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ನೂತನ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಇರುವುದರಿಂದ ರಾಜ್ಯಪಾಲರು ಅವಕಾಶ ಕೊಡಬೇಕು; ಒಂದೊಮ್ಮೆ ಅವರು ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಕೊಟ್ಟರೆ ಅದು ಸಂವಿಧಾನ ವಿರೋಧಿ ಕೃತ್ಯವಾಗುವುದು ಮತ್ತು ನಾವದನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ಕೊಡುವುದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ. ಆದುದರಿಂದ ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು; ಒಂದೊಮ್ಮೆ ಅವರು ಸಂವಿಧಾನಕ್ಕೆ ಚ್ಯುತಿ ಉಂಟುಮಾಡವ ರೀತಿಯಲ್ಲಿ ನಡೆದುಕೊಂಡರೆ ಅದರಿಂದ ಅವರ ಹುದ್ದೆಯ ಘನತೆ ಗೌರವಕ್ಕೆ ಕುಂದುಂಟಾಗುತ್ತದೆ” ಎಂದು ಹೇಳಿದರು.
ರಾಜ್ಯಪಾಲರಿಂದ ಆಹ್ವಾನ ಬಂದರೆ ಮಾತ್ರ
ನೂತನ ಸರಕಾರ ರಚಿಸಲು ರಾಜ್ಯಪಾಲರಿಂದ ಅಹ್ವಾನ ಬಂದರೆ ಮಾತ್ರವೇ ತಾನು ನಾಳೆ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕೇಂದ್ರ ಸಚಿವ ಜಾವಡೇಕರ್ ನೇತೃತ್ವದದಲ್ಲಿ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತೆಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು
ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಿ ಪ್ರಮಾಣ ವಚನ ಬೋಧಿಸಿದ ಬಳಿಕ ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲಾಗುವುದು; ಅನಂತರದಲ್ಲಿ ಸಂಪುಟ ರಚನೆ ಕುರಿತು ನಿರ್ಧರಿಸಲು ಬಿಜೆಪಿ ನಾಯಕರು ತೀರ್ಮಾನಿಸಿರವುದಾಗಿ ಯಡಿಯೂರಪ್ಪ ಹೇಳಿದರು.