ರೈತರ ಸಾಲ ಮನ್ನಾಕ್ಕೆ ಈಗಲೂ ನಾವು ಬದ್ಧ
Team Udayavani, May 24, 2018, 6:00 AM IST
ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಪಲಾಯನವಾದದ ಪ್ರಶ್ನೆಯೇ ಇಲ್ಲ ಎಂದಿರುವ ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಕುರಿತಂತೆ ಈಗಾಗಲೇ ನೀಲನಕ್ಷೆ ಸಿದ್ಧವಾಗಿದೆ.
ಸಮ್ಮಿಶ್ರ ಸರ್ಕಾರವಾಗಿರುವುದರಿಂದ ದೋಸ್ತಿಗಳಲ್ಲಿ ಆರಂಭದಲ್ಲೇ ಅಸಮಾಧಾನ ಉಂಟಾಗಬಾರದು ಎಂಬ ಕಾರಣಕ್ಕೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿ, ಉಪಮುಖ್ಯಮಂತ್ರಿ ಜತೆಗೂಡಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಕೃಷಿ ಸಾಲಮನ್ನಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಜನತೆ ಸಮ್ಮಿಶ್ರ ಸರ್ಕಾರ ಜಾರಿಗೆ ಬರುವಂತೆ ಮಾಡಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ನನ್ನ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಆ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಲಾಗುವುದು” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
“”ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ನಾನೊಬ್ಬನೇ ತೀರ್ಮಾನ ಕೈಗೊಂಡು ದೊಸ್ತಿಗಳಲ್ಲಿ ಅಸಮಾಧಾನ ಉಂಟಾದರೆ ಸರಿಪಡಿಸುವವರು ಯಾರು? ಹೀಗಾಗಿ ಎಲ್ಲವನ್ನೂ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರುವುದರೊಂದಿಗೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಂದುವರಿಸಲಾಗುವುದು. ಎಲ್ಲವನ್ನೂ ಒಟ್ಟಾಗಿ ಕುಳಿತು ನಿರ್ಧರಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಬಿಎಸ್ವೈಗೆ ಸಿಎಂ ಟಾಂಗ್:
ಸಾಲ ಮನ್ನಾ ಮಾಡದಿದ್ದರೆ ಸರ್ಕಾರದ ವಿರುದ್ಧ ದಂಗೆ ಏಳಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಎಷ್ಟು ರೈತರ ಪರವಾಗಿದ್ದಾರೆಂದು ಅವರ ಮುಂದೆಯೇ ಚರ್ಚೆ ಮಾಡುತ್ತೇನೆ. ಯಡಿಯೂರಪ್ಪ ಎರಡು ವರ್ಷ ರಾಜ್ಯ ಸುತ್ತಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ. ಈ ಸಾಲಮನ್ನಾ ವಿಚಾರದಲ್ಲಿ ರೈತರೂ ಪ್ರತಿಭಟನೆ ಮಾಡದಂತೆ ನೋಡಿಕೊಳ್ಳುತ್ತೇನೆ. ಅವರು ಇನ್ನು ಮುಂದೆ ನೆಮ್ಮದಿಯಿಂದ ಇರಲು ಅವಕಾಶ ಕಲ್ಪಿಸುತ್ತೇನೆ. ರಾಜಕಾರಣ ಬಿಟ್ಟು ಅಭಿವೃದ್ದಿ ಪರ ಕೆಲಸಗಳನ್ನು ಮಾಡುತ್ತೇವೆ ಎಂದರು.
ಅತಂತ್ರ ಸ್ಥಿತಿಗೆ ಕಾರಣ ರಾಜಕಾರಣಿಗಳಲ್ಲ:
ಸದ್ಯದ ಅತಂತ್ರ ಪರಿಸ್ಥಿತಿಗೆ ರಾಜಕಾರಣಿಗಳು ಕಾರಣರಲ್ಲ. ಅತಂತ್ರ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳ ಸಮೀಕ್ಷೆಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕರು ನನ್ನ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದಾಗ, ದೇಶ ಕಾಪಾಡುವ ದೃಷ್ಟಿಯಿಂದ ಕಾಂಗ್ರೆಸ್ ಜತೆ ಸರ್ಕಾರ ರಚನೆ ಅನಿವಾರ್ಯ ಎಂದು ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಸಲಹೆ ಮಾಡಿದರು.
ಸದ್ಯದ ರಾಜಕೀಯದಲ್ಲಿ ನಾನು ಸಾಂದರ್ಭಿಕ ಶಿಶುವಾಗಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಒಂದು ರಾಜ್ಯದ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 20ಕ್ಕೂ ಹೆಚ್ಚು ರಾಜ್ಯಗಳ ಸಿಎಂ, ಮಂತ್ರಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಆಯುಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಹೊಂದಾಣಿಕೆಯ ಬಗ್ಗೆ ರಾಜ್ಯದ ಜನತೆ ಸಾಕಷ್ಟು ಅನುಮಾನದಿಂದ ನೊಡುತ್ತಿದ್ದಾರೆ. ಅವರ ಅನುಮಾನ ತಪ್ಪು ಎನ್ನುವುದನ್ನು ಆಡಳಿತದ ಮೂಲಕ ತೋರಿಸಿಕೊಡುತ್ತೇನೆ. ಮೇ 25ರಂದು ವಿಶ್ವಾಸ ಮತ ಗಳಿಸಿದ ನಂತರ ನಮ್ಮ ಸರ್ಕಾರ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದು, ಸಮ್ಮಿಶ್ರ ಸರ್ಕಾರದ ಬಗ್ಗೆ ಇರುವ ಅನುಮಾನ ಮತ್ತು ಬಿಜೆಪಿಯ ಎಲ್ಲ ಟೀಕೆಗಳಿಗೂ ಸದನದಲ್ಲಿಯೇ ಉತ್ತರ ನೀಡುವುದಾಗಿ ಅವರು ತಿಳಿಸಿದರು.
ಮೈತ್ರಿಯಲ್ಲಿ ಯಾವ ಗೊಂದಲವಿಲ್ಲ:
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಯಾವುದೇ ಗೊಂದಲ ಇಲ್ಲ. ಡಿ.ಕೆ. ಶಿವಕುಮಾರ್ ಅವರೊಂದಿಗೂ ಪ್ರತಿದಿನ ಚರ್ಚೆ ಮಾಡಿದ್ದೇವೆ. ಅವರಿಗೂ ಯಾವುದೇ ಅಸಮಾಧಾನ ಇಲ್ಲ. ಏನೇ ಸಮಸ್ಯೆಗಳಿದ್ದರೂ ಪರಮೇಶ್ವರ್ ಜೊತೆ ಚರ್ಚಿಸಿ ಸರಿಪಡಿಸಿಕೊಳ್ಳುತ್ತೇವೆ. ಪರಮೇಶ್ವರ್ ಅವರದ್ದು ಎಲ್ಲರೊಂದಿಗೂ ಹೊಂದಾಣಿಕೆ ಸ್ವಭಾವ ಆಗಿರುವುದರಿಂದ ಸರ್ಕಾರದಲ್ಲಿ ಯಾವುದೇ ಗೊಂದಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಡತನ ಎನ್ನುವುದು ಅಪಘಾತವಲ್ಲ, ಇದನ್ನು ಹೋಗಲಾಡಿಸಬಹುದು. ಜನರಿಗೆ ನ್ಯಾಯ, ಶಾಂತಿ, ಆಹಾರ, ಕೆಲಸ ಮತ್ತು ವಸತಿ ಕೊಡಬಹುದು ಎಂದು ನೆಲ್ಸನ್ ಮಂಡೇಲಾ ಹೇಳುತ್ತಿದ್ದರು. ಇವರ ಮಾತಿನಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಕುರಿತು ನಮ್ಮ ನಿಲುವು ತಿಳಿಸಿದ್ದೇವೆ. ಯಾವುದೇ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡದಂತೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಧರ್ಮದ ವಿಚಾರಕ್ಕಿಂತ ದೊಡ್ಡ ಸಮಸ್ಯೆಗಳು ನಮ್ಮ ಮುಂದಿವೆ. ಅವುಗಳನ್ನು ಬಿಟ್ಟು ಬೇರೆ ವಿಚಾರಕ್ಕೆ ಆದ್ಯತೆ ನೀಡಬಾರದು ಎಂದರು.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.
ಸ್ವಾಮೀಜಿಗಳ ವಿರುದ್ಧ ಸಿಎಂ ಗರಂ
ನಮ್ಮ ಸರ್ಕಾರದ ಬಗ್ಗೆ ಅನಗತ್ಯವಾಗಿ ಮಾತನಾಡುವ ಸ್ವಾಮೀಜಿಗಳು ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ. ಈ ಸರ್ಕಾರ ಯಾವುದೇ ಸಮುದಾಯದ ಹಿತಕ್ಕಾಗಿ ಕಾರ್ಯ ನಿರ್ವಹಿಸುವುದಿಲ್ಲ. ಸ್ವಾಮೀಜಿಗಳು ಗುರುಗಳ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಬೇಕು. ನೀವು ತಿಳಿದುಕೊಂಡ ಹಾಗೆ ನಾವಿಲ್ಲ. ನಾನು ಬಡವರ ಪರವಾಗಿದ್ದೇನೆ. ನನ್ನ ದೃಷ್ಟಿಯಲ್ಲಿ ಬಡವ ಮತ್ತು ಶ್ರೀಮಂತ ಎರಡೇ ಜಾತಿಗಳು. ನಾನು ಬಸವಣ್ಣನವರ ಕಾಯಕ ಸಿದ್ದಾಂತದಲ್ಲಿ ನಂಬಿಕೆ ಇಟ್ಟವನು. “ಇವನಾರವ ಇವನಾರವ’ ಎನ್ನುವುದಿಲ್ಲ. ಎಲ್ಲರೂ ನಮ್ಮವರೇ ಎಂದು ನಡೆಯುವವನು. ಕುವೆಂಪು ಅವರು ಹೇಳಿರುವ “ಸರ್ವ ಜನಾಂಗದ ಶಾಂತಿಯ ತೋಟ’ ನಿರ್ಮಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ಇದೆ ಎನ್ನುವುದಾದರೆ ಸ್ವಾಮೀಜಿಗಳು ನೇರವಾಗಿ ರಾಜಕಾರಣ ಮಾಡಲಿ. ನಿಮ್ಮ ಈ ರೀತಿಯ ಹೇಳಿಕೆಗಳಿಂದ ನಿಮ್ಮ ಬಗ್ಗೆ ಜನರ ಅಭಿಪ್ರಾಯ ಬದಲಾಗುತ್ತದೆ. ನಾನೂ ನೊಂದಿದ್ದೇನೆ. ಭಗವಂತ ಈ ಸ್ಥಾನ ಕೂಡಲು ಹೇಳಿದ್ದಾನೆ. ಸ್ವಾಮೀಜಿಗಳು ಸಂಕುಚಿತ ಮನೋಭಾವ ಬಿಟ್ಟು, ವಿಶಾಲ ಮನೋಭಾವದಿಂದ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಅಶ್ವಮೇಧ ಕುದುರೆ ಕಟ್ಟಿಹಾಕಿದ್ದೇವೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಶ್ವಮೇಧ ಕುದುರೆಯನ್ನು ರಾಜ್ಯದಲ್ಲಿ ಜೆಡಿಎಸ್ ಕಟ್ಟಿಹಾಕುತ್ತದೆ ಎಂದು ಚುನಾವಣಾ ಪೂರ್ವದಲ್ಲೇ ನಾನು ಹೇಳಿದ್ದೆ. ಅದರಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದೆ. ಅಮಿತ್ ಶಾ ಅವರು ಜೀವ ಇಲ್ಲದಿರುವ ಕುದುರೆಯನ್ನು ತೆಗೆದುಕೊಂಡು ಪ್ರಧಾನಿಯವರ ಬಳಿ ಹೋಗಬೇಕಷ್ಟೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಾವು ಸರ್ಕಾರ ರಚನೆ ಮಾಡಿರುವುದು ಅನೈತಿಕ ಎನ್ನುತ್ತಾರೆ. ನೈತಿಕ ಯಾವುದು, ಅನೈತಿಕ ಯಾವುದು? ಯಾರು ನೈತಿಕತೆಯಿಂದ ಇದ್ದಾರೆ ಎಂಬುದು ಗೊತ್ತಾಗುತ್ತದೆ. ನಮ್ಮದೂ ದುಡಿಮೆ ಇದೆ. ಎಲ್ಲಾ ಸಮಾಜವನ್ನೂ ನಾವು ಗೌರವಿಸುತ್ತೇವೆ. ಇದನ್ನು ನಮ್ಮ ಸರ್ಕಾರ ಅನೈತಿಕ ಎನ್ನುವವರು ಅರ್ಥಮಾಡಿಕೊಳ್ಳಬೇಕು ಎಂದರು.
ಅಧಿಕಾರ ಸೂತ್ರ ರಚನೆಯಾಗಿಲ್ಲ
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಧಿಕಾರ ಹಂಚಿಕೆಯ ಸೂತ್ರ ರಚನೆಯಾಗಿಲ್ಲ. ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಆದರೆ, ಬಿಜೆಪಿಯ ದುರಹಂಕಾರ ತಡೆಯಲು ಮುಂದಿನ ಚುನಾವಣೆಗಳಲ್ಲಿ ಹೊಂದಾಣಿಕೆಯಿಂದ ಹೋಗುವ ತೀರ್ಮಾನ ಹೊರಬೀಳಬಹುದು ಎಂದೂ ಇದೇ ವೇಳೆ ಸ್ಪಷ್ಟಪಡಿಸಿದರು.
ಮಹದಾಯಿಗೆ ಪ್ರಧಾನಿ ಮನಸ್ಸು ಮಾಡಬೇಕು
ವಿಧಾನಸಭೆ ಚುನಾವಣೆ ಮುಗಿದು ಮೂರು ತಿಂಗಳಲ್ಲಿ ಮಹದಾಯಿ ವಿವಾದ ಬಗೆಹರಿಸುವುದಾಗಿ ಪ್ರಧಾನಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದರು. ಅವರು ಮನಸ್ಸು ಮಾಡಿದರೆ ಶೀಘ್ರ ಸಮಸ್ಯೆ ಬಗೆಹರಿಯಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಹದಾಯಿ ವಿವಾದ ಮೂರು ರಾಜ್ಯಗಳ ನಡುವಿನ ಸಮಸ್ಯೆ. ಪ್ರಧಾನಿ ಕಚೇರಿಯಲ್ಲಿ ಈ ಸಮಸ್ಯೆ ಬಗೆಹರಿಸುವ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ. ಸದ್ಯದಲ್ಲೇ ಮಹದಾಯಿ ನ್ಯಾಯಾಧಿಕರಣದ ತೀರ್ಪು ಹೊರಬೀಳಲಿದ್ದು, ಅದಕ್ಕೆ ಮುನ್ನ ಪ್ರಧಾನಿಯವರು ವಿವಾದ ಬಗೆಹರಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಈ ಜವಾಬ್ದಾರಿ ನನ್ನ ಜೀವನದ ಹೊಸ ಸವಾಲು. ಒದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಇಡಬೇಕಿದೆ. ಸಮ್ಮಿಶ್ರ ಸರ್ಕಾರದಲ್ಲಿ ದೇಶಕ್ಕೆ ಮಾದರಿಯಾಗುವ ರೀತಿ ಆಡಳಿತ ನೀಡುವ ಭರವಸೆ ಇದೆ. ಎಲ್ಲಾ ಭರವಸೆಗಳನ್ನು ಈಡೇರಿಸಲು ಸಮನ್ವಯ ಸಮಿತಿ ರಚಿಸಿ, ಚರ್ಚಿಸಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.
– ಎಚ್.ಡಿ. ಕುಮಾರಸ್ವಾಮಿ, ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್ನಿಂದ 6, ಬಿಜೆಪಿಯಿಂದ 2 ಮಹಿಳೆಯರು
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ