ಮುದ್ರಾ ಯೋಜನೆ ಫಲಾನುಭವಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ಮುಧೋಳ
Team Udayavani, May 30, 2018, 6:00 AM IST
ಮುಧೋಳ (ಬಾಗಲಕೋಟೆ ): ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ನಡೆಸುತ್ತಿರುವ ಮುಧೋಳ ನಗರದ ಯುವಕ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ, ಮೋದಿ ಅವರಿಂದ ಮೆಚ್ಚುಗೆ
ಪಡೆದರು.
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ಎನ್ಐಸಿ ವಿಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು. ಈ ಸಂವಾದಲ್ಲಿ ಮುಧೋಳದ ಮಂಜುನಾಥ ಶಿವಾಜಿರಾವ್ ಕಮೀತಕರ, ಮೋದಿ ಅವರ ಎದುರು ತನ್ನ ಉದ್ಯೋಗ, ಸಾಲ ಸೌಲಭ್ಯ ಹಾಗೂ ಇತರೆ ಆರು ಜನರಿಗೆ ಉದ್ಯೋಗ ನೀಡಿರುವ ಕುರಿತು ವಿವರಿಸಿದ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಮಂಜುನಾಥ ಅವರೇ, ನಿಮ್ಮ ತಂದೆ ಸರ್ಕಾರಿ ನೌಕರರಾದರೂ, ನೀವು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಿದ್ದೀರಿ. ನಿಮ್ಮ ಈ ಸಾಧನೆ ಇತರೆ ಯುವ ಸಮೂದಾಯಕ್ಕೆ ಪ್ರೇರಣೆಯಾಗಲಿ ಎಂದು ಶುಭ ಕೋರಿದರು. ಮುಧೋಳದ ಮಂಜುನಾಥ ಅವರು ಗದಗ ಪಟ್ಟಣದಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದರು. ತಂದೆ ಸರ್ಕಾರಿ ನೌಕರರಾಗಿದ್ದು, ತಾನು ಸ್ವಯಂ ಉದ್ಯೋಗ
ಕೈಗೊಳ್ಳಲು ಮುದ್ರಾ ಯೋಜನೆಯಡಿ 13 ಲಕ್ಷ ಸಾಲ ಪಡೆದು, ಮೊಬೈಲ್ ಅಂಗಡಿ ಆರಂಭಿಸಿದ್ದಾರೆ. ಸದ್ಯ ಬಹುತೇಕ ಸಾಲ ತೀರಿಸಿದ್ದು, ಈ
ಕುರಿತು ಪ್ರಧಾನಿ ಮೋದಿ ಎದುರು ಹೇಳಿಕೊಂಡರು. ಇದಕ್ಕೆ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.