ಎಳನೀರು ಉತ್ಪಾದನೆ ಹೆಚ್ಚಿದ್ದರೂ ಬೇಡಿಕೆ ಕುಸಿತ!
Team Udayavani, Jun 12, 2018, 6:00 AM IST
ಮಂಡ್ಯ: ಎಳನೀರು ಉತ್ಪಾದನೆ ಹೆಚ್ಚಳ ತೆಂಗುಬೆಳೆಗಾರರ ಮೊಗದಲ್ಲಿ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೂಂದೆಡೆ ಬೇಡಿಕೆ ಕುಸಿತದ ಪರಿಣಾಮ ಬೆಲೆಇಳಿಮುಖವಾಗಿದ್ದು ನಿರಾಸೆಗೂ ಕಾರಣವಾಗಿದೆ.
ದೆಹಲಿ, ಮಹಾರಾಷ್ಟ್ರ ಸೇರಿ ಎಲ್ಲೆಡೆ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಆಂಧ್ರಪ್ರದೇಶ ಹೊರತುಪಡಿಸಿ ಉಳಿದ ಯಾವ ಕಡೆಯಿಂದಲೂ ಎಳನೀರಿಗೆ ಬೇಡಿಕೆ ಬರುತ್ತಿಲ್ಲ. ಜತೆಗೆ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಯಿಂದಲೂ ಎಳನೀರನ್ನು ಕೊಯ್ಲು ಮಾಡು ವುದು ಅಸಾಧ್ಯವಾಗಿದೆ.
ಇದರಿಂದ ಏಷ್ಯಾದಲ್ಲೇ ಪ್ರಸಿದ್ಧಿ ಪಡೆದಿರುವ ಮದ್ದೂರಿನ ಎಳನೀರು ಮಾರುಕ ಟ್ಟೆಗೆ ಬರುವ ಪ್ರಮಾಣದಲ್ಲೂ ಸ್ವಲ್ಪ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಎಳನೀರು ಉತ್ಪಾದನೆ ನಿರೀಕ್ಷೆಗೂ ಮೀರಿದೆ. ಕಳೆದ ವರ್ಷ ಮೇನಲ್ಲಿ 53,58,000 ಎಳನೀರು ಮಾರುಕಟ್ಟೆ ಸೇರಿದ್ದರೆ, ಈ ಬಾರಿ ಏಪ್ರಿಲ್ನಲ್ಲಿ 1.36 ಲಕ್ಷ ಎಳನೀರು ಮಾರುಕಟ್ಟೆಗೆ ಬಂದಿತ್ತು. ಹಿಂದಿನ ವರ್ಷ ಇದೇ ಅವಧಿಯಲ್ಲಿ 7.77 ಲಕ್ಷ ರೂ. ವಹಿವಾಟು ನಡೆದಿದ್ದರೆ, ಪ್ರಸ್ತುತ 16 ಲಕ್ಷ ರೂ. ವಹಿವಾಟು ನಡೆಸಲಾಗಿದೆ.
ಬೇಸಿಗೆಯಲ್ಲಿ ಏರಿದ್ದ ಬೆಲೆ: ಈ ವರ್ಷದ ಬೇಸಿಗೆಯಲ್ಲಿ ಎಳನೀರು ಉತ್ತಮ ಬೆಲೆಗೆ ಮಾರಾಟವಾಗಿದೆ. ಪ್ರತಿ ಎಳನೀರು ಬೆಲೆ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಕನಿಷ್ಠ 25 ರೂ.ನಿಂದ ಗರಿಷ್ಠ 30 ರೂ.ವರೆಗೆ ತಲುಪಿತ್ತು. ಆಗ ವ್ಯಾಪಾರಸ್ಥರು ಎಳನೀರನ್ನು ಟೆಂಪೋಗಳಲ್ಲಿ ತುಂಬಿಕೊಂಡು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು.
ಕೊಯ್ಲು ಮಾಡಲಾಗ್ತಿಲ್ಲ: ಮೇ 4 ರಿಂದ ಮುಂಗಾರು ಪೂರ್ವ ಮಳೆ ಸತತವಾಗಿ ಸುರಿದ ಹಿನ್ನೆಲೆಯಲ್ಲಿ ತೆಂಗಿನ ತೋಟಗಳಲ್ಲೆಲ್ಲ ನೀರು ಆವರಿಸಿದೆ. ಆಗಾಗ ಬೀಳುವ ಸೋನೆ ಮಳೆಯೂ ಮರ ಹತ್ತುವುದಕ್ಕೆ, ಎಳನೀರು ಇಳಿಸುವುದಕ್ಕೆ ಅಡ್ಡಿ ಉಂಟುಮಾಡಿದೆ. ಇದರ ಪರಿಣಾಮ ಮದ್ದೂರಿನ ಎಳನೀರು ಮಾರುಕ ಟ್ಟೆಗೆ ಜನವರಿಯಿಂದ ಪ್ರತಿ ತಿಂಗಳೂ ಬರುತ್ತಿದ್ದ ಎಳನೀರು ಪ್ರಮಾಣ ಏಪ್ರಿಲ್ವರೆಗೆ ಏರುಗತಿಯಲ್ಲಿ ಸಾಗಿತ್ತು. ಮೇನಲ್ಲಿ ಕೊಂಚ ಇಳಿಮುಖ ಕಂಡಿತು.ಜನವರಿಯಲ್ಲಿ 95.30 ಲಕ್ಷ, ಫೆಬ್ರವರಿಯಲ್ಲಿ 99.82 ಲಕ್ಷ, ಮಾರ್ಚ್ನಲ್ಲಿ 1.17 ಕೋಟಿ, ಏಪ್ರಿಲ್ ನಲ್ಲಿ 1.36 ಕೋಟಿ ಉತ್ಪಾದನೆಯಾಗಿದ್ದ ಎಳನೀರು ಮೇ ತಿಂಗಳಲ್ಲಿ 1.18 ಲಕ್ಷಕ್ಕೆ ಇಳಿಕೆಯಾಯಿತು.
ಬೇಡಿಕೆ ಕುಸಿತ: ಜನವರಿಯಿಂದ ಏಪ್ರಿಲ್ ತಿಂಗಳ ಬೇಸಿಗೆ ಅವಧಿಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇತ್ತು. ಮದ್ದೂರು ಎಳನೀರು ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತಿತ್ತು. ಚಂಡಮಾರುತ ಹಾಗೂ ಮುಂಗಾರು ಮಳೆ ಎಲ್ಲೆಡೆ ಚುರುಕಾಗಿರುವುದರಿಂದ ಎಳನೀರಿಗೆ ಸಹಜವಾಗಿಯೇ ಬೇಡಿಕೆ ಕುಸಿದಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಲ್ಲಿಗೆ ಪೂರೈಕೆಯನ್ನೇ ಸ್ಥಗಿತಗೊಳಿಸಲಾಗಿದೆ. ಪ್ರತಿ ಎಳನೀರಿಗೆ 25 ರಿಂದ 30 ರೂ. ಇದ್ದ ಬೆಲೆ ಈಗ 12 ರೂ.ನಿಂದ 20 ರೂ.ಗೆ ಇಳಿದಿದೆ.
ನಿರಂತರ ಮಳೆಯಿಂದಾಗಿ ಮರದಿಂದ ಎಳನೀರು ಇಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಎಳನೀರಿಗೆ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ.ಪ್ರತಿ ಎಳನೀರು 12 ರೂ.ನಿಂದ 20 ರೂ.ವರೆಗಷ್ಟೇ ಮಾರಾಟವಾಗುತ್ತಿದೆ. ಹೊರಗಡೆ
ಯಿಂದಲೂ ಎಳನೀರಿಗೆ ಬೇಡಿಕೆ ಬರುತ್ತಿಲ್ಲ.
– ಮಲ್ಲರಾಜು, ಎಳನೀರು ವರ್ತಕ,
ತೈಲೂರು, ಮದ್ದೂರು ತಾ.
ಮದ್ದೂರಿನ ಎಳನೀರು ಮಾರುಕಟ್ಟೆ ನಷ್ಟದಲ್ಲೇನೂಇಲ್ಲ. ಮಾರುಕಟ್ಟೆಗೂ ನಿರೀಕ್ಷೆಗೂ ಮೀರಿದ ಎಳನೀರು ಏಪ್ರಿಲ್ನಲ್ಲಿ ಬಂದಿತ್ತು. ಮೇನಲ್ಲಿ ಸ್ವಲ್ಪ ಇಳಿಮುಖವಾಗಿದೆ. ಮಳೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಜುಲೈ ತಿಂಗಳಿನಿಂದ ಎಳನೀರು ಹೆಚ್ಚು ಮಾರುಕಟ್ಟೆಗೆ ಬರಲಿದೆ. ಬೇಡಿಕೆಯೂ ಹೆಚ್ಚಾಗುವ ನಿರೀಕ್ಷೆ ಇದೆ.
– ಶ್ರೀಕಂಠಪ್ರಭು, ಕಾರ್ಯದರ್ಶಿ,
ಎಳನೀರು ಮಾರುಕಟ್ಟೆ, ಮದ್ದೂರು
– ಮಂಡ್ಯಮಂಜುನಾಧ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ