ಭತ್ತ ನಾಟಿ ಕಾರ್ಯದಲ್ಲಿ ನಾನೇ ಪಾಲ್ಗೊಳ್ಳುವೆ: ಕುಮಾರಸ್ವಾಮಿ
Team Udayavani, Jun 14, 2018, 6:25 AM IST
ನಾಗಮಂಗಲ: ಹಿಂದಿನ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಹುರುಳಿ ಚೆಲ್ಲುವ ಸಲಹೆ ನೀಡಿತ್ತು. ಮುಂದಿನ ದಿನಗಳಲ್ಲಿ
ಜಿಲ್ಲೆಯೊಳಗೆ ಭತ್ತ ನಾಟಿ ಮಾಡುವ ಕಾರ್ಯಕ್ರಮಗಳಲ್ಲಿ ನಾನೇ ಪಾಲ್ಗೊಳ್ಳುವೆ ಎಂದು ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿ ವಿಶ್ವಾಸದಿಂದ ನುಡಿದಿದ್ದಾರೆ.
ತಾಲೂಕಿನ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಕಾಲಭೈರವ ಸ್ವಾಮಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಲು ಆಗಮಿಸಿದ್ದ ವೇಳೆ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ಉತ್ತಮ ಮಳೆಯಾಗಿರಲಿಲ್ಲ. ವರುಣನ
ಅವಕೃಪೆಯಿಂದ ಭೀಕರ ಬರಗಾಲ ಎದುರಾಗಿತ್ತು. ನೀರಿನ ಅಭಾವದಿಂದ ರೈತರು ಭತ್ತ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಸಾಕಷ್ಟು ಬೆಳೆ ನಷ್ಟಕ್ಕೊಳಗಾಗಿ, ಆತ್ಮಹತ್ಯೆಯ ಹಾದಿ ಹಿಡಿದಿದ್ದರು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದಕ್ಕೆ ದೈವಶಕ್ತಿಯೇ ಕಾರಣ. ಉತ್ತಮ ಮಳೆಯಿಂದ ಭತ್ತ ನಾಟಿ ಮಾಡುವ ದಿನಗಳು ಮರು ಕಳಿಸಿವೆ. ಜಿಲ್ಲೆಯಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮಗಳಲ್ಲಿ ನಾನೇ ಪಾಲ್ಗೊಳ್ಳುತ್ತೇನೆ ಎಂದರು.
ಅಮಾವಾಸ್ಯೆ ಪೂಜೆಗೆ ಆಗಮಿಸಿದ ಮುಖ್ಯಮಂತ್ರಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ನೀಡಲಾಯಿತು.
ನಂತರ, ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಕಾಲ ಭೈರವನ ಪೂಜೆಗೆ ತೆರಳಿದರು. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಮಾವಾಸ್ಯೆಯ ವಿಶೇಷ ಪೂಜೆ ನೆರವೇರಿಸಿದರು. ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಇತರರು ಉಪಸ್ಥಿತರಿದ್ದರು.
ಆದಿ ಚುಂಚನಗಿರಿಯಲ್ಲಿ ನಡೆಯುವ ವಿಶೇಷ ಅಮಾವಾಸ್ಯೆ ಪೂಜೆಯನ್ನು ಬೇರೆ ಕಡೆ ಕಾಣಲು ಸಾಧ್ಯವಿಲ್ಲ. ಇಲ್ಲಿನ
ಕಾಲಭೈರವ ಸ್ವಾಮಿಗೆ ವಿಶೇಷ ಶಕ್ತಿ ಇದೆ. ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು
ಖಚಿತ ಎಂಬ ಭರವಸೆ ಮೂಡಿಸಿದೆ. ಅದೇ ಕಾರಣಕ್ಕೆ ಅಮಾವಾಸ್ಯೆಯಂದು ಪೂಜೆ ಸಲ್ಲಿಸಲು ಬರುತ್ತಿದ್ದೇನೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ