ಕಾವೇರಿ ವಿಚಾರದಲ್ಲಿ ಸಂಘರ್ಷ ಬೇಡ : ದೇವೇಗೌಡ
Team Udayavani, Jun 24, 2018, 6:55 AM IST
ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆ ವಿಚಾರದಲ್ಲಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಪ್ರಾಧಿಕಾರ ರಚನೆ ಕುರಿತಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಇರುವ ಲೋಪಗಳ ಬಗ್ಗೆ ಚರ್ಚಿಸಲು ಸಭೆ ಕರೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿಯವರೊಂದಿಗಿನ ಚರ್ಚೆ ಮತ್ತು ಸಂಸತ್ತಿನಲ್ಲಿ ಈ ವಿಚಾರ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಸಂಬಂಧಿತ ಮತ್ತು ತಾಂತ್ರಿಕ ವಿಚಾರಗಳ ಕುರಿತಂತೆ ಚರ್ಚಿಸಲು ಶನಿವಾರ ತಮ್ಮನ್ನು ಭೇಟಿಯಾದ ಕುಮಾರಸ್ವಾಮಿ ಜತೆ ಸುದೀರ್ಘವಾಗಿ ಮಾತನಾಡಿದ ದೇವೇಗೌಡರು, ಕೇಂದ್ರದ ಸೂಚನೆಯಂತೆ ತಕ್ಷಣವೇ ಪ್ರಾಧಿಕಾರ ಮತ್ತು ಸಮಿತಿಗೆ ಸದಸ್ಯರ ಹೆಸರು ಶಿಫಾರಸು ಮಾಡುವಂತೆ ತಿಳಿಸಿದರು. ಇದೇ ವೇಳೆ ನೀರು ನಿಯಂತ್ರಣ ಸಮಿತಿಗೆ ಯಾರ ಹೆಸರು ಶಿಫಾರಸು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.