ಶಾಂತಿವನದಲ್ಲಿ ಸಚಿವರು, ಶಾಸಕರು;ಸಿದ್ದರಾಮಯ್ಯ ಜೊತೆ ಮಹತ್ವದ ಚರ್ಚೆ!
Team Udayavani, Jun 27, 2018, 3:32 PM IST
ಬೆಂಗಳೂರು : ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶಂಕೆ ವ್ಯಕ್ತಪಡಿಸಿದ ವಿಡಿಯೋ ಭಾರೀ ಚರ್ಚೆ ಹುಟ್ಟು ಹಾಕಿದ ಮರುದಿನ ಬುಧವಾರ ಉಜಿರೆಯ ಶಾಂತಿವನದ ಪ್ರಕೃತಿ ಚಿಕಿತ್ಸಾಲಯಕ್ಕೆ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಆಗಮಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವಿದ್ಯಮಾನ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸಚಿವರಾದ ಶಿವಾನಂದ ಪಾಟೀಲ್ , ರಮೇಶ್ ಜಾರಕಿಹೋಳಿ , ಬಳ್ಳಾರಿ ಶಾಸಕ ನಾಗೇಂದ್ರ , ಅಥಣಿ ಶಾಸಕ ಮಹೇಶ್ ಕಮಟಳ್ಳಿ , ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಬಸವ ಕಲ್ಯಾಣ ಶಾಸಕ ಬಿ.ನಾರಾಯಣ ರಾವ್, ರಾಯಚೂರು ಸಂಸದ ಬಿ.ವಿ.ನಾಯಕ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಮಾಜಿ ಸಚಿವ ಆಂಜನೇಯ, ಪರಿಷತ್ ಸದಸ್ಯ ಧರ್ಮಸೇನಾ, ಐವಾನ್ ಡಿ ಸೋಜ ಅವರು ಶಾಂತಿವನಕ್ಕೆ ಭೇಟಿ ನೀಡಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿದ್ದರಾಮಯ್ಯರೊಡನೆ ಶಾಸಕರು ಮತ್ತು ಸಚಿವರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಯಾವುದೇ ರಾಜಕೀಯವಿಲ್ಲ !
ರಮೇಶ್ ಜಾರಕಿಹೊಳಿ ಅವರು ಮಾತನಾಡಿ ‘ನಮ್ಮ ಭೇಟಿಯಲ್ಲಿ ಯಾವುದೇ ರಾಜಕೀಯವಿಲ್ಲ. ಸಿದ್ದರಾಮಯ್ಯನವರು ನಮ್ಮ ನಾಯಕರು, ಸಿಎಲ್ಪಿ ಲೀಡರ್ ಹಾಗಾಗಿ ಅವರ ಆರೋಗ್ಯ ವಿಚಾರಿಸಲು ತೆರಳುತ್ತಿದ್ದೇವೆ’ ಎಂದಿದ್ದಾರೆ.
ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ ?
ಶಾಸಕ ನಾರಾಯಣ ರಾವ್ ಅವರು ಮಾತನಾಡಿ ‘ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗಿಲ್ಲ. ಅವರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ , ಸಿಎಲ್ಪಿ ಲೀಡರ್ ಆಗಿದ್ದಾರೆ. ಅವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ, ಸರ್ಕಾರದಲ್ಲಿ ಅವರದ್ದೇ ಪ್ರಮುಖ ಪಾತ್ರ ಅವರದ್ದೇ ನೇತೃತ್ವ’ ಎಂದರು.