ಮೈತ್ರಿ ಸರ್ಕಾರಕ್ಕೆ 5 ವರ್ಷ ಧಕ್ಕೆ ಇಲ್ಲ: ಡಾ.ಪರಮೇಶ್ವರ್
Team Udayavani, Jun 28, 2018, 6:50 AM IST
ಕೊಪ್ಪಳ: “ಮೈತ್ರಿ ಸರ್ಕಾರದ ಬಗ್ಗೆ ಸುಮ್ಮನೆ ಕೆಲವು ಗೊಂದಲಗಳು ಉಂಟಾಗುತ್ತಿವೆ. ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ.
ಒಪ್ಪಂದದ ಪ್ರಕಾರ ನಾವು ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುತ್ತೇವೆ’ ಎಂದು ಡಿಸಿಎಂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಪುನರುಚ್ಚರಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿ ಮಾತನಾಡಿ, ನಾವು 5 ವರ್ಷ ಆಡಳಿತ ನಡೆಸುತ್ತೇವೆ ಎಂದು ಜೆಡಿಎಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ. ಯಾರು ಏನೇ ಹೇಳಿದರೂ ಅದು ಅಪ್ರಸ್ತುತ. ಮಾಜಿ ಸಿಎಂ
ಸಿದ್ದರಾಮಯ್ಯ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರು ಖಾಸಗಿಯಾಗಿ ಹೇಳಿಕೆ ನೀಡಿರಬಹುದು. ಅವರನ್ನು ನಾನು ಭೇಟಿಯಾಗಿ ಬಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿಯಾಗಿ ಮಾತನಾಡಿರ ಬಹುದು. ಅವರು ನಮ್ಮ ಪಕ್ಷದ ಹಿರಿಯರು.
ಮೈತ್ರಿ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತವೆ. ಅವೆಲ್ಲವುಗಳನ್ನು ನಾವು ಸಮಾಲೋಚಿಸಿ,ಚರ್ಚೆ ನಡೆಸಿ ಮುನ್ನಡೆಯುತ್ತೇವೆ ಎಂದರು.
ಸಿದ್ದರಾಮಯ್ಯ ಅವರು ಹಳೇ ಬಜೆಟನ್ನೇ ಮುಂದುವರಿಸಿ ಎಂದು ಹೇಳಿರಬಹುದು. ಅದರಲ್ಲಿ ತಪ್ಪೇನಿದೆ? ಈ ಹಿಂದಿನ
ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಮೈತ್ರಿ ಸರ್ಕಾರಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ. ಹಾಗಾಗಿ, ಹೇಳಿ ದ್ದಾರೆ. ಇನ್ನು ದೇವೇಗೌಡರು ಹೊಸ ಬಜೆಟ್ ಮಂಡನೆ ಸೂಕ್ತ ಎಂದಿರುವುದರಲ್ಲಿಯೂ ತಪ್ಪಿಲ್ಲ. ಎಲ್ಲವನ್ನೂ ಸಮನ್ವಯವಾಗಿ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳು ತ್ತೇವೆ ಎಂದರು.
ಜು.5ಕ್ಕೆ ಬಜೆಟ್ ಇರುವ ಬಗ್ಗೆ ಶಾಸಕರಿಗೆ ಮಾಹಿತಿ ತಿಳಿದಿಲ್ಲದಿರುವುದು ನನಗೆ ಗೊತ್ತಿಲ್ಲ.ಬಜೆಟ್ ದಿನ ಡಿಕೆಶಿ ಅವರು ಗೈರಾಗುವ ವಿಚಾರವೂ ನನಗೆ ಗೊತ್ತಿಲ್ಲ ಎಂದರು.