ನಾಳೆ ಉಪಸಭಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ
Team Udayavani, Jul 5, 2018, 7:05 AM IST
ಬೆಂಗಳೂರು: ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆ ಕುರಿತಂತೆ ಅಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ನಿರ್ದೇಶನದ ಮೇಲೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ. ಶುಕ್ರವಾರ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಯಾವುದೇ ಸದಸ್ಯರು ಇನ್ನೊಬ್ಬ ಸದಸ್ಯರನ್ನು ಉಪಸಭಾಧ್ಯಕ್ಷರನ್ನಾಗಿ ಆರಿಸಬೇಕೆಂಬ ಒಂದು ಪ್ರಸ್ತಾಪದ ಸೂಚನೆಯನ್ನು ಲಿಖೀತ ರೂಪದಲ್ಲಿ ಕೊಡಬೇಕು. ಈ ಸೂಚನಾ ಪತ್ರಕ್ಕೆ ಮೂರನೇ ಸದಸ್ಯರೊಬ್ಬರು ಅನುಮೋದನೆ ನೀಡಿರಬೇಕು ಮತ್ತು ಉಪ ಸಭಾಧ್ಯಕ್ಷ ಸ್ಥಾನಕ್ಕೆ ಹೆಸರು
ಸೂಚಿಸಲ್ಪಟ್ಟವರು ತಾವು ಆ ಸ್ಥಾನದಲ್ಲಿ ಸೇವೆ ಸಲ್ಲಿಸಲು ಇಷ್ಟ ಉಳ್ಳವನಾಗಿದ್ದೇನೆ ಎಂದು ತಿಳಿಸುವ
ಹೇಳಿಕೆಯನ್ನೂ ಲಗತ್ತಿಸಬೇಕು.
ಈ ಮಾಹಿತಿಯುಳ್ಳ ಸೂಚನಾ ಪತ್ರವನ್ನು ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಕಾರ್ಯದರ್ಶಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.