ಮಠಾಧೀಶರು ಧರ್ಮದ ಕೆಲಸ ಮಾಡಲಿ
Team Udayavani, Jul 4, 2018, 6:00 AM IST
ವಿಧಾನಸಭೆ: ಮಠಾಧೀಶರು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಧರ್ಮದ ಕೆಲಸ ಮಾಡಿ, ನಿಮಗೆ ಕೈ ಮುಗಿದು ಕೇಳುತ್ತೇನೆ.
ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಕಾವಿ ತೊಟ್ಟವರನ್ನು ನಾವು ದೇವರೆಂದು ನಂಬುತ್ತೇವೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕೈ ಮುಗಿದು ಪ್ರಾರ್ಥಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಕುರುಬ ಸಮಾಜದ ಸ್ವಾಮೀಜಿ ಹಾಗೂ ಒಕ್ಕಲಿಗರ
ಸಮಾಜದ ಸ್ವಾಮೀಜಿ ತಮ್ಮ ಸಮುದಾಯದ ನಾಯಕರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ನಾಚಿಕೆ ಹುಟ್ಟಿಸುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ನ ಭೀಮಾನಾಯ್ಕ, ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆಯೂ ಮಾತನಾಡಿ ಎಂದು ಆಗ್ರಹಿಸಿದರು. ಅವರ ಆಗ್ರಹಕ್ಕೆ ಧ್ವನಿಗೂಡಿಸಿ ಜೆಡಿಎಸ್ನ ಶಿವಲಿಂಗೇಗೌಡ ತರಳಬಾಳು ಸ್ವಾಮೀಜಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದಾಗ ಅವರ ವಿರುದ್ಧ ಎಷ್ಟು ಜನ ಮಾತನಾಡಿದರು. ಆಗ ಈಶ್ವರಪ್ಪ ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲಬೇಕಿತ್ತು ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ಈಶ್ವರಪ್ಪ ಯಾವುದೇ ಸ್ವಾಮೀಜಿಯನ್ನು ವಹಿಸಿಕೊಂಡು ಮಾತನಾಡುತ್ತಿಲ್ಲ. ವ್ಯವಸ್ಥೆಯ ದಾರಿ ತಪ್ಪುತ್ತಿರುವ ಬಗ್ಗೆ ತಮ್ಮ ವೇದನೆ ಹೇಳಿಕೊಳ್ಳು ತ್ತಿದ್ದಾರೆ. ಅವರ ಅಭಿಪ್ರಾಯ ಹೇಳಲಿ ಬಿಡಿ ಎಂದರು. ಈಶ್ವರಪ್ಪ ಮತ್ತೆ ಸ್ವಾಮೀಜಿಗಳ ವಿರುದ್ಧ ವಾಗ್ಧಾಳಿ ಮುಂದುವರಿಸಿ, ತಮ್ಮ ಜಾತಿಯ ರಾಜಕಾರಣಿಗಳನ್ನು ಓಲೈಸಲು ಮಠಾಧೀಶರು ರಾಜಕಾರಣಿಗಳ ಪರ
ಮಾತನಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಲಿಂಗಾಯತ, ಕುರುಬ, ಒಕ್ಕಲಿಗ ಯಾವುದೇ ಸಮಾಜದ ಸ್ವಾಮೀಜಿಗಳಿರಲಿ ಅದು ಸರಿಯಲ್ಲ.
ರಾಜಕಾರಣಿಗಳು ಸಹ ನಮಗೆ ಅನುಕೂಲ ವಾಗುವಂತಿದ್ದರೆ ಸ್ವಾಮೀಜಿಗಳ ಜತೆ ಸೇರಿಕೊಳ್ಳುತ್ತಿದ್ದೇವೆ. ಜಾತಿವಾದ ಮಾಡುವ ರಾಜಕಾರಣಿ ಮತ್ತು ಮಠಾಧೀಶರಿಗೆ ಸದನದ ಮೂಲಕವೇ ಉತ್ತರ ನೀಡಬೇಕು. ಇಲ್ಲದಿದ್ದರೆ, ಸಮಾಜ ಅಧೋಗತಿಗೆ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ವಾಗ್ಧಾಳಿ: ಇದೇ ವೇಳೆ, ಸಮ್ಮಿಶ್ರ ಸರ್ಕಾರದ ವಿರುದಟಛಿ ವಾಗ್ಧಾಳಿ ನಡೆಸಿದ ಅವರು, ಕೋಮುವಾದಿಗಳನ್ನು ದೂರ ಇಡಲು ಕೈ
ಜೋಡಿಸಿರುವುದಾಗಿ ಎರಡೂ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. 1983ರಲ್ಲಿ ಬಿಜೆಪಿ 18 ಸ್ಥಾನಗಳಿಸಿದಾಗ ಅಟಲ್ ಬಿಹಾರಿ ವಾಜಪೇಯಿ
ಕಾಂಗ್ರೆಸ್ಸೇತರ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ದೇವೇಗೌಡ,
ಸಿದ್ದರಾಮಯ್ಯ ಅದೇ ಸರ್ಕಾರದಲ್ಲಿ ಸಚಿವರಾಗಿದ್ದರು. ಆಗ ಕೋಮುವಾದಿಗಳು ಬೇಕಾಗಿದ್ದರಾ ಇವರಿಗೆ ಎಂದು ಪ್ರಶ್ನಿಸಿದರು. ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳಾಯಿತು. ಇದುವರೆಗೂ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಿಲ್ಲ. ಸರ್ಕಾರದ ಭವಿಷ್ಯದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ನವರು ಮಂತ್ರಿಸ್ಥಾನಕ್ಕಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದು. ಜಮಿರ್ ಅಹಮದ್- ತನ್ವೀರ್ ಸೇಠ್ ಅಖಾಡಕ್ಕೆ ಬನ್ನಿ ಎನ್ನುವುದು. ಲಕ್ಷ್ಮೀ ಹೆಬ್ಟಾಳ್ಕರ್ ಹಾಗೂ ಜಯಮಾಲಾ ಅವರ ಹೇಳಿಕೆಗಳು ಸಮಾಜದಲ್ಲಿ ರಾಜಕಾರಣಿಗಳನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ನಮ್ಮ ಹೇಳಿಕೆಗಳು ಮತ್ತು ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡು ತೂಕ
ಕಳೆದುಕೊಳ್ಳುತ್ತಿದ್ದೇವೆ. ಬುದ್ಧಿವಂತರು ಜಾಗ್ರತೆಯಿಂದ ಮಾತನಾಡುತ್ತಾರೆ. ಜಮೀರ್ ಅಹಮದ್- ತನ್ವೀರ್ ಸೇs… ಮುಸ್ಲಿಮರು. ಅವರಿಗೆ ಆ ರೀತಿ ಮಾತನಾಡಲು ಬರುವುದಿಲ್ಲ. ಅವರ ಆಹಾರ ಪದಟಛಿತಿ ಆ ರೀತಿ ಮಾಡಿಸಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈಗಿನ ಸರ್ಕಾರದ ಸಚಿವರು ಶಾಸಕರ ಮಾತುಗಳನ್ನು ಕೇಳಿದರೆ ನನ್ನ ಮೇಲೆ ದಾಳಿಯಾದರೆ ನೀವೇ ರಕ್ಷಣೆಗೆ ಬರುತ್ತೀರಾ ಎಂದು ಪ್ರಶ್ನಿಸಿದರು. ಅದಕ್ಕೆ ರಮೇಶ್
ಕುಮಾರ್ ನಾನು ಮತ್ತು ಯಡಿಯೂರಪ್ಪ ಯಾವಾಗಲೂ ನಿಮ್ಮ ರಕ್ಷಣೆಗೆ ಇದ್ದೇವೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು. ಆಗ ಈಶ್ವರಪ್ಪ
ನಾನಿನ್ನೇನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಮಾತಿಗೆ ವಿರಾಮ ಹೇಳಿದರು.
ಕೋಮುವಾದಿಗಳನ್ನು ದೂರ ಇಡಲು ನೀವೇನು ಜಾತ್ಯತೀತ ಸರ್ಕಾರ ಮಾಡಿದ್ದೀರಾ? ದೇಶದ ಜನತೆಗೆ ಯಾರು ಕೋಮುವಾದಿ, ಜಾತಿವಾದಿ,
ರಾಷ್ಟ್ರವಾದಿಗಳು ಎಂದು ಸ್ಪಷ್ಟವಾಗಿ ಅರ್ಥವಾಗುತ್ತಿದೆ. ವಾಜಪೇಯಿ, ನರೇಂದ್ರ ಮೋದಿಯವರು ಜಾತಿಯಿಂದ ಪ್ರಧಾನಿಯಾಗಿಲ್ಲ. ಜನ ಬೆಂಬಲದಿಂದ ಪ್ರಧಾನಿಯಾಗಿದ್ದಾರೆ.
● ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಾಸಕ
ವಿಧಾನ ಪರಿಷತ್ ಕಲಾಪವನ್ನು ಆಸಕ್ತಿಯಿಂದ ವೀಕ್ಷಿಸುತ್ತಿರುವ ಶಾಲಾ ವಿದ್ಯಾರ್ಥಿಗಳು.