ಬೈಕಿನಿಂದ ನದಿಗೆ ಬಿದ್ದು ತಂದೆ, ಮಗಳು ಸಾವು
Team Udayavani, Jul 5, 2018, 7:05 AM IST
ಗಲಗಲಿ (ಬಾಗಲಕೋಟೆ): ಬೈಕ್ ಮೇಲೆ ತೆರಳುವಾಗ ಆಯತಪ್ಪಿ ಕೃಷ್ಣಾನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋದ ತಂದೆ, ಮಗಳು ಇಬ್ಬರೂ ಮೃತಪಟ್ಟ ಘಟನೆ ಬೀಳಗಿ ತಾಲೂಕಿನ ಗಲಗಲಿಯ ಕೆಳ ಸೇತುವೆ ಬಳಿ ಬುಧವಾರ ನಡೆದಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದ ದಸ್ತಗೀರಸಾಬ ಚಾಂದಸಾಬ ಬೂದಿಹಾಳ (32), ಪುತ್ರಿ ಅನ್ನಮ್ಮು (3) ಮೃತರು.
ಇವರೊಂದಿಗೆ ದಸ್ತಗೀರಸಾಬ ತಂದೆ ಚಾಂದಸಾಬ ಕೂಡ ಬೈಕ್ನಲ್ಲಿದ್ದು, ಪಾರಾಗಿದ್ದಾರೆ.
ದಸ್ತಗೀರಸಾಬ ಪುತ್ರಿಯನ್ನು ಬೈಕ್ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿದ್ದರು. ತಂದೆ ಚಾಂದಸಾಬ ಹಿಂದೆ ಕುಳಿತಿದ್ದರು. ತಡೆಗೋಡೆ ಇಲ್ಲದ ಚಿಕ್ಕ ಸೇತುವೆ ಮೇಲೆ ಹಾದು ಹೋಗುತ್ತಿದ್ದಾಗ ಪುತ್ರಿ ಅನ್ನಮ್ಮು ಗಾಳಿಯ ರಭಸ ಮತ್ತು ಹದಗೆಟ್ಟಿರುವ ಸೇತುವೆಯ ರಸ್ತೆಯಿಂದ ಪುಟಿದು ಬೀಳುತ್ತಿದ್ದಳು. ಆಗ ಮಗಳನ್ನು ಹಿಡಿದುಕೊಳ್ಳಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಪಕ್ಕಕ್ಕೆ ಬಿದ್ದಿದ್ದಾರೆ. ಆಗ ಪುತ್ರಿ ನದಿಯಲ್ಲಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ದಸ್ತಗೀರಸಾಬ ಕೂಡ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.