ಶಾಲೆಗಳ ವಿಲೀನಕ್ಕೆ ಸಾಹಿತಿಗಳ ಗುಡುಗು
Team Udayavani, Jul 8, 2018, 6:00 AM IST
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ವಿಲೀನ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಂದಾಗಿರುವ ಸರ್ಕಾರದ ಮೇಲೆ ಮುಗಿಬಿದ್ದಿರುವ ಸಾಹಿತಿಗಳು ಮತ್ತು ಹೋರಾಟಗಾರರು, “ಇದು ಕನ್ನಡಕ್ಕೆ ಕೊಟ್ಟ ದೊಡ್ಡ ಕೊಡಲಿ ಪೆಟ್ಟಾಗಿದೆ. ಬಜೆಟ್ ನಲ್ಲಿ ಘೋಷಿಸಿದ ಈ ಎರಡೂ ಅಂಶಗಳನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು’ ಎಂದು ಒಕ್ಕೊರಲ ಒತ್ತಾಯ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಶನಿವಾರ ಕನ್ನಡ ಶಾಲೆಗಳ ವಿಲೀನ ಮತ್ತು ಇಂಗ್ಲಿಷ್ ಮಾಧ್ಯಮ ತರಗತಿ ಗಳನ್ನು ಆರಂಭಿಸುವ ನಿರ್ಧಾರ ಕುರಿತ ಸಾಧಕ-ಬಾಧಕಗಳ ಚರ್ಚೆಯಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದಿಟಛಿ ಪ್ರಾಧಿಕಾರ ಸೇರಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರು,ಶಿಕ್ಷಣ ತಜ್ಞರು ಸರ್ಕಾರದ ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕನ್ನಡಕ್ಕೆ ಮಾರಕವಾದ ಎರಡೂ ಅಂಶಗಳನ್ನು ಬಜೆಟ್ನಿಂದ ತೆಗೆದು ಹಾಕುವಂತೆ ಸರ್ಕಾರದ ಮನವೊಲಿಸುವುದು ಮೊದಲ ಆದ್ಯತೆ. ಹಾಗೊಂದು ವೇಳೆ ಇದಕ್ಕೆ ಪೂರಕ ಸ್ಪಂದನೆ ಸಿಗದಿದ್ದರೆ, ಅನಿವಾರ್ಯವಾಗಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೊದಲ ಶಿಫಾರಸು ಉಲ್ಲಂಘನೆ: ಸಭೆಯಲ್ಲಿ ಮಾತನಾಡಿದ ಕನ್ನಡ ಅಭಿವೃದಿಟಛಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ. ಸಿದ್ದರಾಮಯ್ಯ, ಶಾಲೆ ಗಳ ವಿಲೀನದಿಂದ ಬಡ ಮತ್ತು ಕೊಳಚೆ ಪ್ರದೇಶದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದು ಕನ್ನಡಕ್ಕೆ ಕೊಡುವ ದೊಡ್ಡ ಕೊಡಲಿ ಪೆಟ್ಟು. ಈ ಹಿಂದಿನ ಸರ್ಕಾರವು ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಸ್ಪಷ್ಟವಾಗಿ ಭರವಸೆ ನೀಡಿತ್ತು. ಅಷ್ಟೇ ಅಲ್ಲ,ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಕೂಡ ತರಿಸಿಕೊಂಡಿತ್ತು. ಆದರೆ,ಅದರ ಮೊದಲ ಶಿಫಾರಸ್ಸನ್ನೇ ಹೊಸ ಸರ್ಕಾರ ಧಿಕ್ಕರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಧೋರಣೆಗಳ ಹಿಂದೆ ಅಧಿಕಾರಿ ವರ್ಗ ಕೆಲಸ ಮಾಡಿದೆ. ಇಂದು ಪ್ರಾಥಮಿಕ ಶಿಕ್ಷಣದ ದೊಡ್ಡ ಶತ್ರು ಅಧಿಕಾರಶಾಹಿ, ಖಾಸಗಿ ಶಿಕ್ಷಣ ಸಂಸ್ಥೆ ಪರವಾದ ರಾಜಕಾರಣಿಗಳು ಮತ್ತು ಕೆಲ ಮಠಾಧೀಶರು. ಮೊದಲು ಇವರೆಲ್ಲರ ಶುದಿಟಛೀಕರಣದ ಅವಶ್ಯಕತೆ ಇದೆ ಎಂದು ತೀಕ್ಷ್ಣವಾಗಿ ಹೇಳಿದರು.
ಗೋಕಾಕ್ ಮಾದರಿ ಚಳವಳಿ; ಎಚ್ಚರಿಕೆ: ಸಾಹಿತಿ ಪ್ರೊ. ಚಂದ್ರ ಶೇಖರ ಪಾಟೀಲ (ಚಂಪಾ) ಮಾತನಾಡಿ,ಸರ್ಕಾರಿ ಶಾಲೆಗಳ ಸಬಲೀಕರಣ ವರದಿ ಅನುಷ್ಠಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸಬೇಕು. ಒಂದು ವೇಳೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಗೋಕಾಕ್ ವರದಿ ಅನುಷ್ಠಾನಕ್ಕಾಗಿ ನಡೆದ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಕಸಾಪ ಇದರ ನೇತೃತ್ವ
ವಹಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳು ಸರ್ಕಾರದ ಇತಿಮಿತಿ ಗಳಿಗೆ ಒಳಪಟ್ಟಿವೆ. ಆ ಚೌಕಟ್ಟಿನಿಂದ ಅಧ್ಯಕ್ಷರು ಹೊರ ಬಂದು ಹೋರಾಟ ಮಾಡಬೇಕೆಂದು ಅಭಿಪ್ರಾಯಪಟ್ಟರು. ಆಗ ಪ್ರೊ.ಸಿದ್ದರಾಮಯ್ಯ, “ಪ್ರಾಧಿಕಾರದ ಅಧ್ಯಕ್ಷನಾಗಿದ್ದೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ರಕ್ಷಣೆ ಸಾಧ್ಯವಾಗದಿದ್ದರೆ, ಅದು ನನ್ನ ನೈತಿಕ
ಸೋಲಾಗುತ್ತದೆ. ಹಾಗಾಗಿ, ಈ ವಿಚಾರದಲ್ಲಿ ಪದವಿ ತ್ಯಾಗಕ್ಕೂ ನಾನು ಹಿಂದೆ ಸರಿಯುವುದಿಲ್ಲ’
ಎಂದರು.
ತಿದ್ದುಪಡಿಗೆ ಕೇಂದ್ರಕ್ಕೆ ಮನವಿ
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, “ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂನಲ್ಲಿ ನಮಗೆ ಹಿನ್ನಡೆ ಆಗಿದ್ದರೂ,ಸಂವಿಧಾನದಲ್ಲಿ ತಿದ್ದುಪಡಿಗೆ ಹೋರಾಟ ನಡೆಸಬೇಕಿದೆ. ಕೇಂದ್ರ ಸಾಹಿತ್ಯ
ಅಕಾಡೆಮಿಯಲ್ಲೂ ಈ ಸಂಬಂಧ ನಿರ್ಣಯ ತೆಗೆದುಕೊಂಡು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದರು.
ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮಾತನಾಡಿ, ರಾಷ್ಟ್ರೀಯ ಭಾಷಾ ನೀತಿ ಆಗಬೇಕು. ಇದಕ್ಕಾಗಿ ಸಂವಿಧಾನ ತಿದ್ದುಪಡಿ ತರಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಗಳಿರುವ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಶಾಲೆಗಳು ಇರಬಾರದೆಂಬ ನಿಯಮವಿದೆ. ಇದರ
ಕಟ್ಟುನಿಟ್ಟಿನ ಪಾಲನೆ ಆಗಬೇಕಿದೆ ಎಂದು ಪ್ರತಿಪಾದಿಸಿದರು.
ಸಾಹಿತಿ ಡಾ.ಕೊ.ಚೆನ್ನಬಸಪ್ಪ, ಕವಿ ಡಾ.ಸಿದ್ದಲಿಂಗಯ್ಯ, ಜಾನಪದ ತಜ್ಞ ಗೊ.ರು.ಚನ್ನಬಸಪ್ಪ, ಕನ್ನಡ ಅಭಿವೃದಿಟಛಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಲೇಖಕಿಯರಾದ ಡಾ.ವಸುಂಧರಾ ಭೂಪತಿ, ಬಿ.ಟಿ.ಲಲಿತಾ ನಾಯಕ್, ಡಾ.ವಿಜಯಮ್ಮ, ಬನವಾಸಿ ಬಳಗದ ಆನಂದ್, ಅರುಣ್ ಜಾವಗಲ್ ಮತ್ತಿತರರು ಉಪಸ್ಥಿತರಿದ್ದರು. ಸಭೆ ನಂತರ ಸಾಹಿತಗಳ ನಿಯೋಗವು ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.
250 ನಿರುದ್ಯೋಗಿಗಳಿಗೆ ಉದ್ಯೋಗ
ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆದ ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿರುವ 250 ನಿರುದ್ಯೋಗಿಗಳಿಗೆ ಉದ್ಯೋಗ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.
ತಮ್ಮ ಗೃಹ ಕಚೇರಿಯಲ್ಲಿ ಇದಕ್ಕಾಗಿಯೇ ನೇಮಕಗೊಂಡಿರುವ ಕರ್ನಾಟಕ ಔಟ್ಸೋರ್ಸ್ ಟೆಕ್ನಾಲಜಿ ತಂಡವು ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆ ಆಲಿಸಲು ಸಮಯ ನಿಗದಿ ಮಾಡುವಂತೆ ಹಾಗೂ ಅಂಗವಿಕಲರು, ಬಡ ಹೆಣ್ಣು ಮಕ್ಕಳು ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಲು ಸೂಚಿಸಿ ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾಧಿಕಾರಿಗಳಿಂದ ಬಗೆಹರಿಸಲಾಗದ ಸಮಸ್ಯೆಗಳನ್ನು ಮುಖ್ಯಮಂತ್ರಿ ಶಿಫಾರಸು ಮಾಡಬಹುದು. ಈ ಕೆಲಸವನ್ನು ತಿಂಗಳಿಗೆ ಎರಡು ಬಾರಿ ಖುದ್ದು ಪರಿಶೀಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ಪ್ರಧಾನ ಕಾರ್ಯದರ್ಶಿಗಳು ಕುಂದು ಕೊರತೆಗಳ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳ ಮೂಲಕ ತಮ್ಮ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಆಡಳಿತದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲವು ಮಾರ್ಪಾಡುಗಳನ್ನು ತರಲಾಗುತ್ತಿದೆ ಎಂದು ತಿಳಿಸಿದರು.
ಯಾವುದೇ ಸಂದರ್ಭದಲ್ಲೂ ಕನ್ನಡ ಭಾಷೆಗೆ ಮಾರಕವಾಗುವ ತೀರ್ಮಾನ ಕೈಗೊಳ್ಳುವುದಿಲ್ಲ.ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಕನ್ನಡಿಗರ ಹಿತ ಕಾಪಾಡುವ ಸದುದ್ದೇಶವೇ ನಮ್ಮ ಸರ್ಕಾರದ ಗುರಿ. ಗ್ರಾಮೀಣ ಮಕ್ಕಳ ಅನುಕೂಲಕ್ಕೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆ ಕಲಿಸಲು ನಿರ್ಧರಿಸಲಾಗಿದ್ದು, ಇದರಿಂದ ಕನ್ನಡಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ