ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
Team Udayavani, Jul 8, 2018, 6:00 AM IST
ಕುಮಟಾ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾಂಡುರಂಗ ಹೋಟೆಲ್ ಬಳಿ ಶನಿವಾರ ಮಧ್ಯಾಹ್ನ 4:45ರ ಸುಮಾರಿಗೆ ಸಾರಿಗೆ ಸಂಸ್ಥೆ ಬಸ್ ಹಾಗೂ ಭಾರೀ ಸರಕು ಸಾಗಣೆ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದ್ದು, 18 ಮಂದಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮಟಾ ತಾಲೂಕಿನ ಹೊಸ್ಕಟ್ಟಾ ನಿವಾಸಿ ಶಶಿಕಲಾ ಈಶ್ವರ ಹರಿಕಂತ್ರ (60) ಹಾಗೂ ತೊರ್ಕೆ ಸಮೀಪದ ಗೊನೆಹಳ್ಳಿಯ ವೆಂಕಟೇಶ ಗಣಪತಿ ಗುನಗಾ (45) ಮೃತಪಟ್ಟವರು. ಫಯಾಜ್(5), ಕಲ್ಯಾಣಿ(67), ಪ್ರಸಾದ ಬಾಂದೇಕರ(30), ಹೇಮ(22) ಗಂಭೀರ ಗಾಯಗೊಂಡಿದ್ದಾರೆ. ಕುಮಟಾ-ಗೋಕರ್ಣ ಸಾಮಾನ್ಯ ಸಾರಿಗೆ ಬಸ್ ಹಾಗೂ ಎಸ್ಕೆ ನಾಯ್ಡುವಿಲಾಸ್ ಹೆಸರಿನ ಬೃಹತ್ ಸರಕು ಸಾಗಣೆ ಲಾರಿ ನಡುವೆ ಅಪಘಾತವಾಗಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ ಉಕ್ಕಿನ ಬೃಹತ್ ಕಂಬವು ಬಸ್ಗೆ ಬಡಿದು ಬಸ್ನ ಬಲಭಾಗವು ಮುಂದಿನಿಂದ ಹಿಂದಿನವರೆಗೂ ಕಿತ್ತುಹೋಗಿದೆ. ಹೀಗಾಗಿ ಬಸ್ನಲ್ಲಿ ಬಲಭಾಗಕ್ಕೆ ಕುಳಿತಿದ್ದ ಬಹುತೇಕ ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಎಂಟು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇನ್ನುಳಿದ ಗಾಯಾಳುಗಳಿಗೆ ಕುಮಟಾ ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ತೀವ್ರತೆಗೆ ಸಾರಿಗೆ ಬಸ್ನ ಬಲ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.