ವಿಧಾನ ಸಭೆಯಲ್ಲಿ ಉದಯವಾಣಿ ಪ್ರಸ್ತಾಪ
Team Udayavani, Jul 11, 2018, 6:00 AM IST
ವಿಧಾನಸಭೆ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಬಂಧ “ಉದಯವಾಣಿ’ ಪತ್ರಿಕೆಯ ಜೋಶ್ ಪುರವಣಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಕುಗ್ರಾಮ ಅಕ್ಲಾಪುರದ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನನ್ಯ ಎಚ್.ಎಸ್. ಮುಖ್ಯಮಂತ್ರಿಗಳಿಗೆ ಬರೆದಿರುವ ಬಹಿರಂಗ ಪತ್ರ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.
ಶೂನ್ಯ ವೇಳೆಯಲ್ಲಿ ಮಂಗಳವಾರ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ದುಡ್ಲಿ ಮನೆ ಎಂಬಲ್ಲಿ ವಿದ್ಯಾರ್ಥಿನಿ ಆಶಿಕಾ (15) ಎಂಬಾಕೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ ಅವರು ಜೋಶ್ ಪುರವಣಿಯಲ್ಲಿ ಪ್ರಕಟವಾದ ಪತ್ರದ ಬಗ್ಗೆಯೂ ಪ್ರಸ್ತಾಪಿಸಿದರು.
ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಮುನ್ನ ಉದಯವಾಣಿ ಪತ್ರಿಕೆಯ ಜೋಶ್ ಕಾಲಂನಲ್ಲಿ ತೀರ್ಥಹಳ್ಳಿ ತಾಲೂಕಿನ ಕುಗ್ರಾಮ ಅಕ್ಲಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅನನ್ಯ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನೊಮ್ಮೆ ಓದಿ. ನಂತರ ನಿರ್ಧಾರ ಕೈಗೊಳ್ಳಿ ಎಂದು ಆಗ್ರಹಿಸಿದರು.
“ಶಾಲೆಗೆ ಬೀಗ ಹಾಕುವ ಮುನ್ನ ನಮ್ಮ ಕಂಗಳನು ನೋಡಿ…’ ಎಂದು ಬಾಲಕಿ ಮಲೆನಾಡು ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಎದುರಿಸುತ್ತಿರುವ ಸಮಸ್ಯೆಗಳು, ಸೌಕರ್ಯಗಳಿಲ್ಲದಿದ್ದರೂ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾಳೆ. ಆಕೆ ಬರೆದಿರುವ ಪತ್ರವನ್ನು ಓದಿದರೆ ಮಲೆನಾಡಿನ ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಸರ್ಕಾರಕ್ಕೆ ಅರ್ಥವಾಗುತ್ತದೆ ಎಂದರು.