ಚಾರ್ಮಾಡಿ ರಸ್ತೆ ಅಗಲೀಕರಣಕ್ಕೆ ನೂರೆಂಟು ವಿಘ್ನ
Team Udayavani, Jul 18, 2018, 6:00 AM IST
ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಭಾಗವನ್ನು ಸಂಪರ್ಕಿಸುವ ಪ್ರಮುಖ ಸೇತುವಾಗಿರುವ ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲ ಬಂತೆಂದರೆ ಗುಡ್ಡ ಕುಸಿಯುವುದು, ರಸ್ತೆ ಸಂಪರ್ಕ ಸ್ಥಗಿತವಾಗುವುದು ಸಾಮಾನ್ಯ. ಇದರಿಂದ ವಾಹನ ದಟ್ಟಣೆ ಅಧಿಕವಾಗಿ ರುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ದೊರಕುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮಲೆನಾಡಿನಿಂದ ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳಾದ ಧರ್ಮಸ್ಥಳ, ಉಡುಪಿ, ಸುಬ್ರಹ್ಮಣ್ಯ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಚಾರ್ಮಾಡಿ ಘಾಟಿ. ಈ ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು 8
ಸಾವಿರ ವಾಹನಗಳು ಸಂಚರಿಸುವುದರಿಂದ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಘಾಟಿಯ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ವರದಿ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜನಪ್ರತಿ ನಿಧಿಗಳು ಸೂಚಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ಮುಂದಾದರೆ ಸಾಕಷ್ಟು ಪ್ರಮಾಣದ ಅರಣ್ಯ ನಾಶಪಡಿಸಬೇಕಾಗುತ್ತದೆ. ಇದಕ್ಕೆ ಪರಿಸರ ಇಲಾಖೆ ಅನುಮತಿ ನೀಡುವುದಿಲ್ಲ. ಅದರೊಂದಿಗೆ ಘಾಟಿಯ ಕೆಲವೊಂದು ತಿರುವುಗಳ ಅಗಲೀಕರಣ ಸಾಧ್ಯವಿಲ್ಲವೆಂಬ ವರದಿಯನ್ನು ಸರ್ಕಾರಕ್ಕೆ ನೀಡಿದೆ.
ಎಷ್ಟು ತಿರುವುಗಳಿವೆ?: ಈ ಘಾಟಿಯಲ್ಲಿ ಒಟ್ಟು 11 ತಿರುವುಗಳಿವೆ. ಈ ಪೈಕಿ 2 ತಿರುವು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಗೆ ಬಂದರೆ ಉಳಿದವು ದಕ್ಷಿಣ ಕನ್ನಡ ವ್ಯಾಪ್ತಿಗೆ ಬರುತ್ತವೆ. ಈ ವರ್ಷ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ 3 ಬಾರಿ ಗುಡ್ಡ ಕುಸಿದಿತ್ತು. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಬಾರಿ ಗುಡ್ಡ ಕುಸಿತ ಉಂಟಾಗಿತ್ತು. ಕರಾವಳಿಗೆ ಸಂಪರ್ಕ ಕಲ್ಪಿಸುವ ಮತ್ತೂಂದು ರಸ್ತೆ ಶಿರಾಡಿ ಘಾಟಿಯಲ್ಲಿ ರಸ್ತೆ ಅಭಿವೃದಿಟಛಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ತೀವ್ರವಾಗಿತ್ತು.
ಮಂಗಳೂರು ತಲುಪಲು 150 ಕಿ.ಮೀ.: ಚಿಕ್ಕಮಗಳೂರಿನಿಂದ ಚಾರ್ಮಾಡಿ ಘಾಟಿ ಮೂಲಕ ಮಂಗಳೂರು ತಲುಪಲು 150 ಕಿ.ಮೀ. ಆಗುತ್ತದೆ. ಇದಕ್ಕೆ ಪರ್ಯಾಯವಾಗಿ ಇರುವ ಕುದುರೆಮುಖ, ಎಸ್.ಕೆ.ಬಾರ್ಡರ್ ಮೂಲಕ ಮಂಗಳೂರು ತಲುಪಲು ಸುಮಾರು 225 ಕಿ.ಮೀ., ಶೃಂಗೇರಿ-ಕೆರೆಕಟ್ಟೆ ಮೂಲಕ ತಲುಪಲು ಸುಮಾರು 200 ಕಿ.ಮೀ. ದೂರವಾಗುತ್ತದೆ. ಶಿರಾಡಿ ಘಾಟಿ ರಸ್ತೆ ಬಂದ್ ಆದಾಗ ಚಾರ್ಮಾಡಿ ಘಾಟಿಯಲ್ಲಿ ಸುಮಾರು 14 ಸಾವಿರ ವಾಹನಗಳು ಸಂಚರಿಸುತ್ತವೆ. ಈ ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿಯೇ ಸಾರ್ವಜನಿಕರ ಸಭೆ ಕರೆದು ಚರ್ಚಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ
ಚಾರ್ಮಾಡಿಯಲ್ಲಿ ರಸ್ತೆ ವಿಸ್ತರಣೆ ಸಾಧ್ಯವಿಲ್ಲವೆಂಬುದು ಖಚಿತವಾದ ನಂತರ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮತ್ತೂಂದು ಮಾರ್ಗದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವರದಿ ಸಿದ್ಧಪಡಿಸಿದೆ. ಮಂಗಳೂರಿನಿಂದ ಬಂಟ್ವಾಳ- ನೆಲ್ಯಾಡಿ- ಮೂಡಿಗೆರೆ- ಚಿಕ್ಕಮಗಳೂರು -ಕಡೂರು- ಹೊಸದುರ್ಗ- ಹೊಳಲ್ಕೆರೆ ಮೂಲಕ ಚಿತ್ರದುರ್ಗಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪ್ರಾಧಿಕಾರ ಸಿದ್ಧಪಡಿಸಿದೆ. ಈ ಮಾರ್ಗದಲ್ಲಿ ಸುಮಾರು 11 ಕಿ.ಮೀ. ದಟ್ಟಾರಣ್ಯ ಬರುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಪರಿಸರ ಇಲಾಖೆಯ ಅನುಮತಿ ಅಗತ್ಯ. ಈ ಹಿಂದೆಯೂ ಒಮ್ಮೆ ಈ ರಸ್ತೆ
ನಿರ್ಮಾಣದ ವಿಚಾರ ಬಂದಾಗ ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸಿದ್ದರು.
ಮಂಗಳೂರು- ನೆಲ್ಯಾಡಿ- ಚಿಕ್ಕಮಗಳೂರು- ಚಿತ್ರದುರ್ಗ ರಸ್ತೆ ಪೂರ್ಣಗೊಂಡರೆ ಚಾರ್ಮಾಡಿ ರಸ್ತೆಯನ್ನು ಲಘು ವಾಹನಗಳ ಓಡಾಟಕ್ಕೆ ಮೀಸಲಿರಿಸಿ ಭಾರೀ ವಾಹನಗಳ ಓಡಾಟಕ್ಕೆ ಶಿಶಿಲಾ- ಭೈರಾಪುರದ ಮೇಲೆ ನಿರ್ಮಾಣ ವಾಗುವ ರಸ್ತೆ ಉಪಯೋಗಿಸಬಹುದು.
● ಎಂ.ಕೆ. ಶ್ರೀರಂಗಯ್ಯ, ಜಿಲ್ಲಾಧಿಕಾರಿ
ರಸ್ತೆ ವಿಸ್ತರಣೆ ಮಾಡಿದಲ್ಲಿ ಎಷ್ಟು ಅರಣ್ಯ ಪ್ರದೇಶ ಬೇಕಾಗುತ್ತದೆಂಬ ಕುರಿತು ವರದಿ ನೀಡಲು ಸೂಚಿಸಿದ್ದೇನೆ. ನಂತರ ಯಾವ ರಸ್ತೆ ನಿರ್ಮಾಣಕ್ಕೆ ಕಡಿಮೆ ಅರಣ್ಯ ಪ್ರದೇಶ ಬೇಕಾಗುವುದೋ ಆ ರಸ್ತೆ ಮಾಡಲು ತೀರ್ಮಾನಿಸಲಾಗುವುದು.
● ಶೋಭಾ ಕರಂದ್ಲಾಜೆ, ಸಂಸದೆ
ಎಸ್.ಕೆ.ಲಕ್ಷ್ಮೀಪ್ರಸಾದ್