24 ಕ್ಷೇತ್ರದಲ್ಲಿ ಗೆಲ್ಲೋದು ಬಿಜೆಪಿ ಗುರಿ: ಬಿಎಸ್ವೈ
Team Udayavani, Jul 19, 2018, 6:25 AM IST
ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದ್ದು, ಜು.27ರಂದು ಸಂಭವಿಸಲಿರುವ ಚಂದ್ರ ಗ್ರಹಣದ ನಂತರ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬಿಜೆಪಿ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 24 ಲೋಕಸಭಾ ಕ್ಷೇತ್ರದಲ್ಲಿ
ಗೆಲ್ಲುವುದು ಪಕ್ಷದ ಗುರಿ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ಅ ಧಿಕಾರಕ್ಕೆ ಬರಬೇಕು. ಇದಕ್ಕಾಗಿ ಎಲ್ಲ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಪ್ರತ್ಯೇಕ ರಾಜ್ಯ ಬೇಡ: ಪ್ರತ್ಯೇಕ ರಾಜ್ಯದ ಬಗ್ಗೆ ಯಾರೂ ಮಾತನಾಡಬಾರದು. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದರೆ ಹೋರಾಟ ಮಾಡಿ ಮಾಡಿಸಿಕೊಳ್ಳಬೇಕು. ಪ್ರತ್ಯೇಕ ರಾಜ್ಯದ ಕೂಗು ಸಮಸ್ಯೆಗೆ ಪರಿಹಾರವಲ್ಲ. ಯಾವುದೇ ಪಕ್ಷದವರಾದರೂ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಬಾರದು ಎಂದರು.
ಗ್ರಹಣದ ನಂತರ ರಾಜ್ಯ ಪ್ರವಾಸ: ಜು.27ರಂದು ಸಂಭವಿಸುವ ಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹೇಳಲಾಗುತ್ತಿದೆ. ಇದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಲಾಗುತ್ತಿದೆ. ಜು.27ರ ನಂತರ ಶುಭ ಕಾರ್ಯಗಳನ್ನು ಇಟ್ಟುಕೊಳ್ಳಿ ಎಂದು ಕಾರ್ಯಕರ್ತರಿಗೂ ಸೂಚಿಸಿದ್ದೇನೆ. ನಾನು ಕೂಡ ಜು.27ರ ನಂತರ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.