ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಕೆ.ಎಸ್.ಈಶ್ವರಪ್ಪ
Team Udayavani, Jul 27, 2018, 7:00 AM IST
ಶಿವಮೊಗ್ಗ: ರಾಜ್ಯದಲ್ಲಿ ಮಂತ್ರಿಗಳಿದ್ದಾರೆ, ಆದರೆ ಸರಕಾರವೇ ಇಲ್ಲ. ಯಾಕೆಂದರೆ ಯಾವ ಸಚಿವರಿಗೆ ಎಲ್ಲಿಗೆ ಹೋಗಬೇಕು. ಏನು ಮಾಡಬೇಕು ಅನ್ನುವುದೇ ಗೊತ್ತಿಲ್ಲ. ಅಧಿಕಾರಿಗಳಿಗೆ ಮಂತ್ರಿಗಳ ಭಯ ಇಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಜಿಲ್ಲೆಗೂ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಮಂತ್ರಿಗಳಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ ಇಲ್ಲ. ಮಂತ್ರಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಇದರಿಂದ ಅವರಾಡಿದ್ದೇ ಆಟವಾಗಿದೆ ಎಂದರು.
ಬುಧವಾರ ಶಿವಮೊಗ್ಗಕ್ಕೆ ನಗರಾಭಿವೃದ್ಧಿ ಸಚಿವರು ಬಂದಾಗ ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿ ಬರಬೇಕಾಗಿತ್ತು. ಅವರು
ಬಂದಿಲ್ಲ. ಅಧಿಕಾರಿಗಳಿಗೆ ಯಾವ ರೀತಿಯ ಮನಸ್ಥಿತಿ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲ ಶಾಸಕರು ಇನ್ನೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಅಧಿಕಾರ ಪಡೆದವರು ಏನು ಮಾಡುತ್ತಿದ್ದಾರೆ ಎಂಬುದು ದೇವರಿಗೇ ಗೊತ್ತು ಎಂದರು.