ಉಪನ್ಯಾಸಕರಿಗೆ ಸವಾಲಾಗಿದೆ ಒಂದೇ ರೂಪ ಎರಡು ಗುಣ
Team Udayavani, Aug 7, 2018, 6:35 AM IST
ಕುಣಿಗಲ್: ತುಮಕೂರು ಜಿಲ್ಲೆ ಕುಣಿಗಲ್ನ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ವರು ಅವಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಅವಳಿಗಳನ್ನು ಗುರುತಿಸುವುದೇ ನಿತ್ಯ ಉಪನ್ಯಾಸಕರಿಗೆ ಸವಾಲಾಗಿದೆ. ಕಳೆದ ಸಾಲಿನಲ್ಲಿ ಮೂರು ಜೋಡಿ ಕಾಲೇಜಿಗೆ ದಾಖಲಾಗಿದ್ದರು. ಈ ಬಾರಿ ಮತ್ತೂಂದು ಅವಳಿ ವಿದ್ಯಾರ್ಥಿಗಳು ದಾಖಲಾಗುವ ಮೂಲಕ ಜೋಡಿಗಳು ನಾಲ್ಕಕ್ಕೇರಿದಂತಾಗಿದೆ.
ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದ ದಿಲ್ಶಾದ್ ವಜೀರ್ ಖಾನ್ ದಂಪತಿ ಪುತ್ರಿಯರಾದ ಸಾನಿಯಾ ಹಾಗೂ ಸಾದಿಯಾ ಪ್ರಥಮ ಪಿಯು,ಕೊತ್ತಗೆರೆಯ ಗೌರಮ್ಮ ಜಗದೀಶ್ ದಂಪತಿಯ ಮಕ್ಕಳಾದ ಜಿ.ಅರುಣ್, ಜಿ. ವರುಣ್, ಆಡಿಲಿಂಗನಪಾಳ್ಯ ಗ್ರಾಮದ ರಾಜಮ್ಮ ಮಂಜುನಾಥ್ ದಂಪತಿ ಮಕ್ಕಳಾ ಲತಾ, ಲಾವಣ್ಯ ಹಾಗೂ ಚಿಕ್ಕೋನಹಳ್ಳಿ ಗ್ರಾಮದ ಶಿವಲಿಂಗಮ್ಮ ಸಿದ್ದಲಿಂಗಯ್ಯ ದಂಪತಿ ಮಕ್ಕಳಾದ ಕವನ, ಕಾವ್ಯ ಅವಳಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ವಿಶೇಷವಾದರೂ ಅವಳಿಗಳು ಕಾಲೇಜಿನಲ್ಲಿ ಮುಜುಗರ ಅನುಭವಿಸುವಂತಾಗಿದೆ.
ಸಹಪಾಠಿಗಳು ತಮ್ಮನ್ನು ಗುರುತಿಸುವಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ ಎನ್ನುತ್ತಾರೆ ಈ ವಿದ್ಯಾರ್ಥಿಗಳು. ಉಪನ್ಯಾಸಕರಿಗೂ ಇವರನ್ನು ಗುರುತಿಸುವುದೇ ಸವಾಲಾಗಿದೆ. ಮೂರು ಜೋಡಿಗಳು ಒಂದು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಈಗಲೂ ಗುರುತು ಸಿಗದೇ ಗೊಂದಲದಲ್ಲಿ ಎಷ್ಟೋ ಬಾರಿ “ನಾನು ಅವನಲ್ಲ ನಾನು ಅವಳಲ್ಲ’ ಎಂದು ಅವರೇ ಸ್ಪಷ್ಟಪಡಿಸುವುದೂ ಸಾಮಾನ್ಯವಾಗಿದೆ.