ಸುತ್ತೂರು, ಕೆಆರ್ಎಸ್ಗೆ ಸಿಎಂ ಭೇಟಿ
Team Udayavani, Aug 12, 2018, 6:45 AM IST
ಮೈಸೂರು/ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಶುಕ್ರವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ, ಶನಿವಾರ ಬೆಳಗ್ಗೆ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಭೀಮನ ಅಮವಾಸ್ಯೆ ಪ್ರಯುಕ್ತ ಅನಿತಾ ಕುಮಾರಸ್ವಾಮಿ ಅವರು ಪತಿಯ ಪಾದಪೂಜೆ ಮಾಡಿದರು. ಬಳಿಕ ಸುತ್ತೂರು ಮಠಕ್ಕೆ ಆಗಮಿಸಿ, ಶ್ರೀಗಳ ಆಶೀರ್ವಾದ ಪಡೆದರು.
ಸಂಜೆ, ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದರು. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಸಿ.ಎಸ್.ಪುಟ್ಟರಾಜು ಜತೆಗಿದ್ದರು. ಜಲಾಶಯದ ಹೊರಹರಿವು ಹೆಚ್ಚಿರುವುದರಿಂದ ನದಿಪಾತ್ರದ ಜನರ ಸುರಕ್ಷತೆಯ ಬಗ್ಗೆ ಹಾಗೂ ಪ್ರವಾಹ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.