ಈ ಬಾರಿಯೂ ನನಗೇ ಟಿಕೆಟ್: ಸಂಸದ ಪ್ರತಾಪ್ ಸಿಂಹ ವಿಶ್ವಾಸ
Team Udayavani, Aug 14, 2018, 6:30 AM IST
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದಿಲ್ಲ ಎಂದೆಲ್ಲ ಮಾಧ್ಯಮಗಳು ಸುದ್ದಿ ಹರಡುತ್ತಿದ್ದಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೆ ಟಿಕೆಟ್ ಪಡೆದವನು ನಾನು, ಈ ಬಾರಿಯೂ ನನಗೇ ಟಿಕೆಟ್, ಗೆಲುವು ನನ್ನದೇ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ರಾಜವಂಶಸ್ಥ ಯದುವೀರ್ ರಾಜಕಾರಣಕ್ಕೆ ಬರುವುದಿಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ ಲೋಕಸಭೆ ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಪದೇಪದೆ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದರ ಬದಲು ಅವರನ್ನೇ ಮತ್ತೂಮ್ಮೆ ಪ್ರತ್ಯಕ್ಷವಾಗಿ ಕೇಳಿ ಬಿಡಿ ಎಂದರು. ಬಿಜೆಪಿಯಲ್ಲಿ ಟಿಕೆಟ್ ಗೊಂದಲವಿದೆ ಎಂಬುದೆಲ್ಲ ಸುಳ್ಳು. ನನಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗಲ್ಲ. ಮೈಸೂರು-ಕೊಡಗು ಜಿಲ್ಲೆಗಳ ಜನತೆ ನನ್ನ ಜತೆಗಿದ್ದಾರೆ. ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ನನಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ನಾನೇ, ಮುಂದಿನ ಲೋಕಸಭಾ ಸದಸ್ಯನೂ ನಾನೇ ಎಂದು ಹೇಳಿದರು. ನರೇಂದ್ರಮೋದಿ ಅವರೇ ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿರುವಾಗ ನನಗೆ ಸರ್ಟಿಫಿಕೇಟ್ ಕೊಡಲು ಅವರಿಗಿಂತ ದೊಡ್ಡ ವ್ಯಕ್ತಿಯಾರಿದ್ದಾರೆಂದು ಪ್ರಶ್ನಿಸಿದರು.